ವಿಜಯಪುರ: ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟ ಮುಂದುವರೆದಿದ್ದು, ಕರ್ನಾಟಕದ ಬಸ್ ಗಳಿಗೂ ಬೆಂಕಿ ಹಚ್ಚಲಾಗುತ್ತಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ವಿಜಯಪುರ ಜಿಲ್ಲೆಯಿಂದ ಮಹಾರಾಷ್ಟ್ರದ ಕೆಲ ಭಾಗಗಳಿಗೆ ಸಂಪರ್ಕಿಸುವ 42 ಸರ್ಕಾರಿ ಬಸ್ ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ಸಾರಿಗೆ ಉಪವಿಭಾಗಾಧಿಕಾರಿ ಮೊಹಮ್ಮದ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪುಣೆ, ಮುಂಬೈ, ಲಾತೋರ್, ನಾಂದೇಡ್, ತುಳಜಾಪುರ ಸೇರಿದಂತೆ ಇತರೆ ಪ್ರದೇಶಗಳಿಗೆ ತೆರಳಬೇಕಿದ್ದ ಕೆಕೆಆರ್ ಟಿಸಿ ಬಸ್ ಸಂಚಾರ ಬಂದ್ ಮಾಡಲಾಗಿದೆ. ಜಿಲ್ಲೆಯಿಂದ ನಿತ್ಯ 124 ಬಸ್ ಗಳು ಮಹಾರಾಷ್ಟ್ರಕ್ಕೆ ಸಂಚಾರ ಮಾಡುತ್ತಿದ್ದವು. ಈ ಪೈಕಿ 42 ಬಸ್ ಗಳ ಸಂಚಾರ ಬಂದ್ ಮಾಡಲಾಗಿದೆ. ಸೊಲ್ಹಾಪುರ, ಸಾಂಗ್ಲಿ, ಮೀರಜ್ಗೆ ಮಾತ್ರ ಕರ್ನಾಟಕದ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿ ಎಂದಿನಂತೆ ಮಹಾರಾಷ್ಟ್ರ ಸರ್ಕಾರಿ ಬಸ್ ಗಳು ಸಂಚರಿಸಲಿವೆ. ಮರಾಠಿ ಮೀಸಲಾತಿ ಹೋರಾಟದ ತೀವ್ರತೆಯಿರೋ ಪ್ರದೇಶದಲ್ಲಿ ಸಹಜ ಸ್ಥಿತಿ ಕಂಡು ಬಂದ ನಂತರ ಎಂದಿನಂತೆ ಬಸ್ ಗಳ ಸಂಚಾರ ಆರಂಭಿಸುವುದಾಗಿ ವಿಜಯಪುರ ಜಿಲ್ಲಾ ಸಾರಿಗೆ ಉಪವಿಭಾಗಾಧಿಕಾರಿ ಮೊಹಮ್ಮದ್ ಫಯಾಜ್ ತಿಳಿಸಿದರು.
ಮಹಾರಾಷ್ಟ್ರದ ಮೂವರು ಸಚಿವರು, ಸಂಸದರಿಗೆ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ
ಮಹಾರಾಷ್ಟ್ರ ಸಚಿವರಾದ ಶಂಭುರಾಜೆ ದೇಸಾಯಿ, ಚಂದ್ರಕಾಂತ ಪಾಟೀಲ್, ದೀಪಕ್ ಕೇಸರಕರ್, ಸಂಸದ ಧೈರ್ಯಶೀಲ್ಗೆ ಇಂದಿನಿಂದ ನವೆಂಬರ್ 2ರ ಸಂಜೆ 6ರವರೆಗೆ ಬೆಳಗಾವಿ ಗಡಿ ಪ್ರವೇಶ ನಿರ್ಬಂಧ ಹೇರಿ ಡಿಸಿ ನಿತೇಶ್ ಪಾಟೀಲ್ ಆದೇಶ ನೀಡಿದ್ದಾರೆ.
ಎಂಇಎಸ್ ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಸಿಎಂ ಶಿಂಧೆ ಬೆಂಬಲಿಸಿದ್ದರು. ಮಹಾರಾಷ್ಟ್ರದಿಂದ ಪ್ರತಿನಿಧಿಗಳನ್ನ ಕಳಿಸುವುದಾಗಿ ಹೇಳಿದ್ದರು. ಸಿಎಂ ಶಿಂಧೆ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.