ಚಾಮರಾಜನಗರ: ತಾಲೂಕು ಗಡಿ ಗ್ರಾಮವಾದ ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಹಾಗೂ 50ನೇ ಸುವರ್ಣ ಕರ್ನಾಟಕ ಸಂಭ್ರಮ ಕಾರ್ಯಕ್ರಮವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಚಾಮರಾಜನಗರ ಜಿಲ್ಲೆ, ಅಪ್ಪಟ ಕನ್ನಡ ಪ್ರದೇಶವಾಗಿದೆ. ಚಾಮರಾಜನಗರದ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕನ್ನಡ ಜೀವಂತವಾಗಿದೆ. ಗ್ರಾಮೀಣ ಹಾಗೂ ಜನಪದ ಶೈಲಿಯ ಕನ್ನಡ ಅತ್ಯಂತ ಶ್ರೇಷ್ಠವಾದ ರೀತಿಯಲ್ಲಿ ಹಾಗೂ ನಿತ್ಯ ನಿರಂತರವಾಗಿ ಬಳಕೆಯಾಗುತ್ತಿದೆ. ಕನ್ನಡದ ಸಂಸ್ಕೃತಿ, ನೃತ್ಯ ,ಸಂಗೀತ ,ನಾಟಕ, ರಂಗಭೂಮಿ, ಜನಪದ ಇನ್ನೂ ಕನ್ನಡದ ಅಸ್ಮಿತೆಯಲ್ಲಿಯೇ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶದ ಜನರು ಕನ್ನಡದ ಬಗ್ಗೆ ವಿಶೇಷವಾದ ಅಭಿಮಾನ ಹಾಗೂ ಬಳಕೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಹಿರಿಯ ಉಪನ್ಯಾಸಕರಾದ ಆರ್ ಮೂರ್ತಿ ಮಾತನಾಡಿ, ಕನ್ನಡ ಭಾಷೆ ಒಂದು ಸುಂದರ ಹಾಗೂ ಮಧುರ ಭಾಷೆ. ಕನ್ನಡದ ರಾಜ್ಯೋತ್ಸವ ವರ್ಷಪೂರ್ತಿ ಕನ್ನಡದ ಬಳಕೆಯ ಮೂಲಕ ಆಚರಣೆ ಆಗಬೇಕಿದೆ ಎಂದರು.
ಪ್ರಾಚಾರ್ಯರಾದ ಶಿವನಂಜಪ್ಪನವರು ಮಾತನಾಡಿ ಕನ್ನಡ ಭಾಷೆ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೇ .ಕನ್ನಡವನ್ನು ಪ್ರತಿನಿತ್ಯ ನಾವು ಬಳಕೆ ಮಾಡಿದಾಗ ಕನ್ನಡ ಭಾಷೆಯ ಉಳಿಯಲಿದೆ. ಕನ್ನಡವೇ ನಮಗೆ ಆನಂದದ ಭಾಷೆ. ಸಂತೋಷ ,ಸಂಭ್ರಮ, ನೆಮ್ಮದಿ ಸಿಗುವುದು ಕನ್ನಡದಲ್ಲಿ ಮಾತನಾಡಿದಾಗ ಎಂದರು.
ಉಪನ್ಯಾಸಕರಾದ ಶಿವಸ್ವಾಮಿ, ಶ್ರೀಕಂಠ ನಾಯಕ, ಬಸವಣ್ಣ, ರಮೇಶ್ ,ಸುರೇಶ್ ಕನ್ನಡ ಭಾಷೆ ಸಂಸ್ಕೃತಿ ಪರಂಪರೆ ಮತ್ತು ಇತಿಹಾಸದ ಬಗ್ಗೆ ವಿವರವಾಗಿ ತಿಳಿಸಿದರು.
ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಸಾಮೂಹಿಕವಾಗಿ ಹಾಡಿದರು. ಕನ್ನಡ ಬಾವುಟ ಹಿಡಿದು, ಕನ್ನಡ ಶಲ್ಯಗಳನ್ನೂ ಧರಿಸಿ ಸಂಭ್ರಮಿಸಿದರು.