ಚಾಮರಾಜನಗರ : ಮಕ್ಕಳು ವಿದ್ಯಾರ್ಥಿ ದೆಸೆಯಿಂದಲೇ ನಿರಂತರ ಹಾಗೂ ಕಠಿಣ ವಿದ್ಯಾಭ್ಯಾಸ ಮಾಡಿದರೆ ಮಾತ್ರ ತಮ್ಮ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ಎಂದು ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಆರ್.ಗಂಗಾಧರ್ ಅಭಿಪ್ರಾಯಿಸಿದರು. ನಗರದ ಜೋಡಿ ರಸ್ತೆಯಲ್ಲಿರುವ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಸಮರೋಪ ಸಮಾರಂಭ ಹಾಗೂ ಅಂತಿಮ ಬಿ ಇಡಿ ಪ್ರಶಿಕ್ಷಣಾರ್ಥಿಗಳಿಗೆ ಏರ್ಪಡಿಸಿದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಮಕ್ಕಳು ವಿದ್ಯಾರ್ಥಿಯಾಗಿದ್ದಾಗಿಂದಲೇ ನಿರಂತರ ಹಾಗೂ ಕಠಿಣ ಅಭ್ಯಾಸಕ್ಕೆ ಒತ್ತು ನೀಡಬೇಕು.
ಇಂತಹ ಮಕ್ಕಳ ಭವಿಷ್ಯವು ಉತ್ತಮವಾಗಿ ರೂಪುಗೊಳ್ಳಲು ಶಿಕ್ಷಕರ ಪಾತ್ರವೂ ಅತೀ ಮುಖ್ಯವಾಗಿದೆ. ಇಂತಹ ಭವಿಷ್ಯ ರೂಪಿಸುವ ಶಿಕ್ಷಕರನ್ನು ಸರ್ವ ಸನ್ನಧ್ದವಾಗಿ ಸಿದ್ದಪಡಿಸುವ ಜವಾಬ್ದಾರಿ ಶಿಕ್ಷಣ ಮಹಾವಿದ್ಯಾಲಯಗಳಿಗೆ ಇರುತ್ತದೆ. ಸಮಾಜದಲ್ಲಿ ಶಿಕ್ಷಕರಿಗೆ ಬ್ರಹ್ಮ ವಿಷ್ಣು ಮಹೇಶ್ವರರ ಸ್ಥಾನವನ್ನು ನೀಡಲಾಗಿದೆ. ಅವರನ್ನು ದೇವರೆಂದೇ ಪೂಜಿಸಲಾಗುತ್ತದೆ. ಆದ್ದರಿಂದ ಪ್ರಶಿಕ್ಷಣಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳುವ ಜೊತೆಗೆ ಶಿಕ್ಷಕ ಸ್ಥಾನಕ್ಕೆ ಗೌರವ ತಂದುಕೊಡುವ ಕೆಲಸ ಮಾಡಬೇಕು. ನವಸಮಾಜವನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದ ಅವರು, ಜೆ.ಎಸ್.ಎಸ್. ವಿದ್ಯಾಪೀಠವು ಶಿಕ್ಷಣ ಸಂಸ್ಥೆ, ಆರೋಗ್ಯ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡಿ ಜನಮಾನಸವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆಎಸ್ಎಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಆರ್ ಎಂ ಸ್ವಾಮಿ, ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ಕೆ ಸಿ, ಬಸವಣ್ಣ, ಉಪನ್ಯಾಸಕರಾದ ಎಸ್ ಎನ್ ರಾಜು, ಎನ್ ಎಂ ಮಲ್ಲೇಶ್, ಕೆ ಎಸ್ ಸಿದ್ದರಾಜು, ಸುರೇಶ್ ಡಿಎಸ್, ಎನ್ ನಾಗರಾಜು, ಎಂ ಬಿ ಶ್ರೀಧರ್, ಎ ಜೆ ಸದಾನಂದ, ಕೆ ಎಂ ಯೋಗೇಶ್, ಲಕ್ಷ್ಮೀ, ಶಿವಶಂಕರರಾಜೇ ಅರಸ್, ಗೀತಾ, ಶಿವಕುಮಾರ್ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.
