ರಾಮನಗರ: ಭ್ರಷ್ಠಾಚಾರ ತೊಲಗಿಸಲು ಎಲ್ಲರೂ ಕೈ ಜೋಡಿಸಿ, ದೇಶವನ್ನು ಅಭಿವೃದ್ಧಿ ಪಡಿಸಿ ಹಾಗೂಧರ್ಮವನ್ನು ಯಾರು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ.ಅನಿತಾಎನ್.ಪಿ ಅವರು ತಿಳಿಸಿದರು. ಅವರು ಇಂದುಕರ್ನಾಟಕ ಲೋಕಾಯುಕ್ತ ಹಾಗೂ ರಾಮನಗರ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಠಾಣೆ ವತಿಯಿಂದ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಾಗೃತಿ ಅರಿವು ಸಪ್ತಾಪ-೨೦೨೩ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತೀ ವರ್ಷ ವಲ್ಲಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಸಪ್ತಾಹ ವಾರ ಎಂದು ಗುರುತಿಸಿ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಿದೆ.ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಪ್ರತೀ ವರ್ಷ ಭ್ರಷ್ಠಾಚಾರದ ಅರಿವು ಮೂಡಿಸುತ್ತಿದೆ.ಈ ಕಾರ್ಯಕ್ರಮವು ನವೆಂಬರ್ ೫ರ ವರೆಗೆ ನಡೆಯುತ್ತದೆ ಎಂದರು. ಸರ್ಕಾರಿ ನೌಕರರಾಗಿ ಸರ್ಕಾರದ ನಿಯಮಾವಳಿನ್ವಯ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು.ಸರ್ಕಾರಿ ನೌಕರರು ವರ್ಷದ ಅಂತ್ಯಕ್ಕೆ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ತಿಳಿಸಿದರು.ಲೋಕಾಯುಕ್ತದ ವ್ಯಾಪ್ತಿಯಲ್ಲಿದೇಶದಲ್ಲಿನ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಗೌರವಧನ ಪಡೆಯುವ/ವೇತನ ಪಡೆಯುವ ಸಂಸ್ಥೆಗಳು, ರಾಜ್ಯಗಳಲ್ಲಿರುವ ಸಂಘ-ಸಂಸ್ಥೆಗಳು, ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು ಒಳಗೊಂಡಿರುತ್ತದೆ.೨೦೨೩ರ ಅಂಕಿಅಂಶಗಳ ಪ್ರಕಾರ ೧೮೦ ದೇಶಗಳ ಪೈಕಿ ಭಾರತವು ಭ್ರಷ್ಠಾಚಾರದಲ್ಲಿ ೮೫ನೇ ಸ್ಥಾನದಲ್ಲಿದೆ ಎಂದರು.
ಪ್ರಥಮ ಬಾರಿಗೆ ೧೯೮೮ರಲ್ಲಿ ಭ್ರಷ್ಠಾಚಾರ ಅಧಿನಿಯಮವನ್ನು ಜಾರಿಗೆ ತರಲಾಯಿತು ನಂತರ ೨೦೧೮ರಲ್ಲಿಕಠಿಣ ಶಿಕ್ಷೆಯೊಂದಿಗೆ ಹಾಗೂ ಅನೇಕ ತಿದ್ದುಪಡಿಗಳೊಂದಿಗೆ ೨ನೇ ಬಾರಿಗೆಜಾರಿಗೆ ತರಲಾಯಿತುಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಅವರು ಮಾತನಾಡಿ, ನೌಕರರಾದ ನಾವುಗಳು ಸಾರ್ವಜನಿಕರ ಸೇವೆ ಮಾಡಲು ಸರ್ಕಾರಿ ಕೆಲಸಕ್ಕೆ ಸೇರಿದ್ದೇವೆ. ಅಧಿಕಾರ ಚಲಾಯಿಸಲು ಅಲ್ಲ ಎಂಬುದನ್ನು ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಅರಿತು ಕರ್ತವ್ಯ ನಿರ್ವಹಿಸಿದಾಗ ಜನಸಾಮಾನ್ಯರ ಬಹುತೇಕ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರಾಮನಗರ ಲೋಕಾಯುಕ್ತ ಇಲಾಖೆಯ ಉಪ ಪೊಲೀಸ್ ಅಧೀಕ್ಷಕ ಎಂ.ಆರ್.ಗೌತಮ್ ಅವರು ಭ್ರಷ್ಠಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಚಿಕ್ಕ ಸುಬ್ಬಯ್ಯ, ರಾಮನಗರ ಲೋಕಾಯುಕ್ತ ಇಲಾಖೆಯ ಡಿ.ಎಸ್.ಪಿ ಸುಧೀರ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.