ಚಾಮರಾಜನಗರ: ಕನ್ನಡದ ಆತ್ಮಜ್ಯೋತಿ ಬೆಳಗಿಸಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆ, ಸಂಭ್ರಮ, ಉಳಿಸಿ ಬೆಳೆಸುವ ಕಾರ್ಯ ಆಗಲಿ. ಕನ್ನಡ ಬೆಳೆಸುವುದು ಕನ್ನಡಿಗರ ಕರ್ತವ್ಯವಾಗಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಬಿ.ಕೆ ದಾನೇಶ್ವರಿ ಅವರು ತಿಳಿಸಿದರು.
ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯೂತ್ ಕ್ಲಬ್ ನಗರದ ಜೈಹಿಂದ್ ಕಟ್ಟೆಯಲ್ಲಿ ಕನ್ನಡಾಂಬೆಗೆ ಕನ್ನಡದಾರತಿ ,ಕನ್ನಡ ರಂಗೋಲಿ, ಕನ್ನಡದ ಜ್ಯೋತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡತನ ,ಕನ್ನಡದ ಚಿಂತನೆ, ಕನ್ನಡದ ಯೋಚನೆ ಪ್ರತಿಯೊಬ್ಬರಲ್ಲೂ ಮೂಡಿದಾಗ ಭಾಷೆ ಉನ್ನತವಾಗಿ ಬೆಳೆಯಲಿದೆ. ಭಾಷೆಗೆ ಬಳಕೆ ಮುಖ್ಯ. ಬಳಕೆಯಾಗದೆ ಇದ್ದಾಗ ಭಾಷೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಮನೆ ಮನೆಯಲ್ಲೂ ಕನ್ನಡದ ಆತ್ಮ ಜ್ಯೋತಿಯನ್ನು ಬೆಳಗಿಸುವ ಮೂಲಕ ಕನ್ನಡದ ಭಾಷೆಯನ್ನು ನಾವು ಬಳಸೋಣ ಎಂದರು.
ನಿವೃತ್ತ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಮಾತನಾಡಿ, ಕನ್ನಡದ ಇತಿಹಾಸ ಸಾವಿರಾರು ವರ್ಷಗಳ ಇತಿಹಾಸವಿದೆ.ಕದಂಬರು,ಗಂಗರು ಹೊಯ್ಸಳರು, ಆಳಿದ ನಾಡು . ಜ್ಞಾನ ಪೀಠ ಪ್ರಶಸ್ತಿಗಳ ನಾಡು ಕರ್ನಾಟಕವಾಗಿದೆ. ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಭೈರಪ್ಪನವರು ನಮ್ಮ ಕರ್ನಾಟಕದವರು ಎಂಬುದು ಹೆಮ್ಮೆ. ಸಾಹಿತ್ಯವೇ ಜೀವನ. ಪುಸ್ತಕಗಳ ಅಧ್ಯಯನದ ಮೂಲಕ ಕನ್ನಡ ಸಾಹಿತ್ಯವನ್ನು ಉಳಿಸೋಣ ಎಂದರು.

ಕವಿಯತ್ರಿ ಸಿಎಸ್ ಮಂಜುಳಾ ಮಾತನಾಡಿ ಕನ್ನಡ ರಾಜ್ಯೋತ್ಸವ ಕನ್ನಡಿಗರ ಬೆಳಕಾಗಿ ಕನ್ನಡದ ಸ್ಪೂರ್ತಿಯನ್ನು ತುಂಬುವ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕು. ಅನೇಕ ತಪಸ್ವಿಗಳ ಹಿನ್ನೆಲೆಯಲ್ಲಿ ಕನ್ನಡ ಶಾಶ್ವತವಾಗಿ ಉಳಿದು ಬೆಳೆದು ಬರುತ್ತಿದೆ ಎಂದರು.
ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಅಧ್ಯಕ್ಷತೆ ವಹಿಸಿ ಮಾತನಾಡಿ ಚಾಮರಾಜನಗರ ಜಿಲ್ಲೆ, ಕರ್ನಾಟಕದಲ್ಲಿ ಅತಿ ಹೆಚ್ಚು ಕನ್ನಡವನ್ನು ಬಳಸುವ ಜಿಲ್ಲೆಗಳಲ್ಲಿ ಒಂದಾಗಿದೆ . ಚಾಮರಾಜನಗರ ಗಡಿ ಜಿಲ್ಲೆಯಲ್ಲಿದ್ದರು ಕನ್ನಡದ ಸಂಸ್ಕೃತಿ, ಪರಂಪರೆ, ಹಬ್ಬಗಳು, ಉತ್ಸವಗಳು ಎಲ್ಲವನ್ನು ಆಚರಿಸಿಕೊಂಡು ಕನ್ನಡದ ವಾತಾವರಣವನ್ನು ಉಂಟುಮಾಡಿದೆ. ಕರ್ನಾಟಕ ಸರ್ಕಾರ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಒಂದು ವರ್ಷಗಳ ಕಾಲ ನಿರಂತರವಾಗಿ ನಡೆಸುತ್ತಿದೆ. ಕನ್ನಡವೇ ನಮ್ಮ ಉಸಿರು ಎಂಬಂತೆ ಕನ್ನಡದ ವಾತಾವರಣವನ್ನು ಸೃಷ್ಟಿ ಮಾಡೋಣ. ಕನ್ನಡದ ಜ್ಯೋತಿಯನ್ನು ಬೆಳಗಿಸಿ ಮನೆಮನೆಯಲ್ಲೂ ಕನ್ನಡದ ವಾತಾವರಣವನ್ನು ಉಂಟು ಮಾಡಿ ಸಂತೋಷ , ಸಡಗರ, ಸಂಭ್ರಮದ ಮೂಲಕ ಸ್ಪೂರ್ತಿಯನ್ನು ತುಂಬುವಂತಹ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಮಾಡೋಣ ಎಂದು ತಿಳಿಸಿದರು.
ರಂಗೋಲಿಯ ಮೂಲಕ ಕನ್ನಡದ ಸ್ಫೂರ್ತಿಯ ಕಾರ್ಯ ಜರುಗಿತು.
ಕಾರ್ಯಕ್ರಮದಲ್ಲಿ ನಾಟ್ಯಕಲಾ ಸರಸ್ವತಿ ಸಂಸ್ಥೆಯ ಅಧ್ಯಕ್ಷರಾದ ಡಾ. ಅಕ್ಷತಾ ಜೈನ್, ಜೈಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ಮಾಲ ,ನಾಗಶ್ರೀ, ಋಗ್ವೇದಿ. ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಋಗ್ವೇದಿ, ಸಾನಿಕ, ಮಾಲತಿ,ಶ್ರಾವ್ಯ ಬಿಕೆ ಆರಾಧ್ಯ, ಶ್ರಾವ್ಯ, ಸಿಂಚನ, ಉಪಸ್ಥಿತರಿದ್ದರು.