ಮೈಸೂರು : ಭಾರತದ ಜನಸಂಖ್ಯೆಯಲ್ಲಿ ಮಹಿಳೆಯರು ಪುರಷರಷ್ಟೆ ಸಮನಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಛಾಪನ್ನು ಮೂಡಿಸಿರುವುದರಿಂದ ಮಹಿಳೆಯರಿಗೆ ಶೇ.೫೦% ಮೀಸಲಾತಿ ಕೊಡಬೇಕು ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಕೃಷ್ಣಮೂರ್ತಿ ಚಮರಂ ಸರ್ಕಾರವನ್ನು ಒತ್ತಾಯಿಸಿದರು.
ಬೋಗಾದಿಯಲ್ಲಿರುವ ಸಮಾಜಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ-೨ರಲ್ಲಿ ನಡೆದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿರುವ ೧೪೦ ಕೋಟಿ ಜನರು ಡಾ. ಬಾಬು ಸಾಹೇಬ್ ಅಂಬೇಡ್ಕರ್ರವರ ಸಂವಿಧಾನದಡಿಯಲ್ಲೆ ಬದುಕಬೇಕು ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚೆ ಬ್ರಿಟೀಷ್ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಅಂಬೇಡ್ಕರ್ರವರು ಕಾರ್ಮಿಕರ ಕಷ್ಟ ಸುಖಗಳನ್ನು ಕಣ್ಣಾರೆ ನೋಡಿ, ದಿನಕ್ಕೆ ೮ ಗಂಟೆಗೆ ಕೆಲಸ, ಸಮಾನವೇತನ, ಕೆಲಸಮಾಡುವ ಹೆಣ್ಣುಮಕ್ಕಳು ಗರ್ಭಿಣಿಯರಾದರೆ ವೇತನ ಸಹಿತ ರಜೆ, ವಿಮೆ, ಹಿಂದು ಬಿಲ್ ಕೋಡ್ ತಂದು ಗಂಡು ಮಕ್ಕಳಷ್ಟೆ ಹೆಣ್ಣು ಮಕ್ಕಳಿಗು ಪಾಲು, ಆಸ್ತಿಹಕ್ಕು, ವಿಧವಾವಿವಾಹಕಾಯ್ದೆ, ಮಹಿಳೆಯರಿಗೆ ಶೇ. ೩೩% ಮೀಸಲಾತಿ ತಂದರು ವಿದ್ಯಾರ್ಥಿಗಳು ಕಂಚಾಚಾರ ಮೂಡನಂಬಿಕೆಗಳನ್ನು ಬಿಟ್ಟು ಅಂಬೇಡ್ಕರ್ರವರನ್ನು ಮಾದರಿಯಾಗಿಟ್ಟುಕೊಂಡು ಗುರಿಇಟ್ಟುಕೊಂಡು ಸಾಧನೆ ಮಾಡಿ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿನಿರ್ದೇಶಕ ಬಿ. ರಂಗೇಗೌಡ ಮಾತನಾಡಿ, ವಿದ್ಯಾರ್ಥಿನಿಯರು ಅಂಬೇಡ್ಕರ್ರವರ ಚಿಂತನೆಗಳನ್ನು ಅಳವಡಿಸಿಕೊಂಡು ಸಾಧನೆ ಮಾಡಬೇಕು ಓದುವ ಕಡೆ ಹೆಚ್ಚು ಗಮನಕೊಟ್ಟು ಸಮಾಜಕೋಸ್ಕರ ಏನನ್ನಾದರೂ ಕೊಡುಗೆ ನೀಡಿ ಆದರ್ಶ ವ್ಯಕ್ತಿಗಳಾಗಿ, ಮೂಡನಂಬಿಕೆ ಕಟ್ಟುಪಾಡುಗಳನ್ನು ಬಿಟ್ಟು ಬಂದು ಸಮಾಜಮುಖಿ ಕೆಲಸ ಮಾಡಿ ಎಂದರು. ಸಮಾರಂಭದಲ್ಲಿ ಮಹಿಳಾಚಿಂತಕರಾದ ಪ್ರೇಮಭೋದಿ, ಸಹಾಯಕ ನಿರ್ದೇಶಕ ಕೆ. ಸಿದ್ದಲಿಂಗ, ವಾರ್ಡನ್ ಚಂದ್ರಮ್ಮ ಎಂ., ಗಾಯಕ ಮರಿಸ್ವಾಮಿ, ರಶ್ಮಿನರೀಪುರ, ನಿಶ್ಚಿತ ಹಾಜರಿದ್ದರು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಎಲ್ಲಾ ನಿಲಯಪಾಲಕರು ಉಪಸ್ಥಿತರಿದ್ದರು.