ಬಳ್ಳಾರಿ: ಕೇಂದ್ರ ಸರ್ಕಾರದ ಒಂಭತ್ತು ವರ್ಷಗಳ ಸಾಧನೆಗಳು, ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆ, ಸ್ವಚ್ಛ ಭಾರತ ಹಾಗೂ ಇನ್ನಿತರೆ ಯೋಜನೆಗಳ ಕುರಿತು ಬಳ್ಳಾರಿ ಕ್ಷೇತ್ರಿಯ ಕೇಂದ್ರ ಸಂವಹನ ಇಲಾಖೆ ವತಿಯಿಂದ ಇಲ್ಲಿನ ವೀರಶೈವ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದೆ.
ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಮಾಜಿ ಮಹಾಪೌರರಾದ ಎಂ.ರಾಜೇಶ್ವರಿ ಅವರು ಇಂದು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಲು ಇಂಥಹ ಜಾಗೃತಿ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ, ಹಾಗಾಗಿ ಇಂಥ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಿ ಆಯೋಜಿಸುವಂತೆ ಸಲಹೆ ನೀಡಿದರು.
ಹೈದರಾಬಾದ್ನ ದೂರದರ್ಶನ ಕೇಂದ್ರದ ನಿವೃತ್ತ ಉಪನಿರ್ದೇಶಕ ಡಾ.ಕೆ.ಸುಧಾಕರ್ ರಾವ್ ಅವರು ಅತಿಥಿ ಉಪನ್ಯಾಸಕರಾಗಿ ಮಾತನಾಡಿ, ಕೃಷಿ ಸಿಂಚಯಿ ಯೋಜನೆ, ಸಾಯಿಲ್ ಆರೋಗ್ಯ ಕಾರ್ಡ್, ಕಿಸಾನ್ ಸಮ್ಮಾನ್, ನೀಮ್ ಕೋಟೆಡ್ ಯೂರಿಯಾ, ಮೇರಿ ಮಾಠಿ ಮೇರಾ ದೇಶ್, ಏಕ ಭಾರತ ಶ್ರೇಷ್ಠ ಭಾರತ, ಆಯುಷ್ಮಾನ್ ಭಾರತ್, ಒಂದು ರಾಷ್ಟ್ರ-ಒಂದು ಮಾರುಕಟ್ಟೆ-ಒಂದು ತೆರಿಗೆ, ಕೃಷಿ ನಿರ್ವಹಣೆಯಲ್ಲಿ ಪರ್ಯಾಯ ಪೊಷಕಾಂಶಗಳ ಬಳಕೆಗೆ ಉತ್ತೇಜನ ನೀಡುವ ಪಿಎಂ ಪ್ರಣಾಮ್ ಯೋಜನೆಗಳ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಗೀತ ಮತ್ತು ನಾಟಕ ವಿಭಾಗದ ಕಲಾವಿದರಿಂದ ಜಾಗೃತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ನಿಷ್ಟಿ ರುದ್ರಪ್ಪ, ವೀರಶೈವ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎಸ್.ಗೌತಮ್, ಆಡಳಿತ ಮಂಡಳಿಯ ಸದಸ್ಯರು, ಬಳ್ಳಾರಿ ಕೇಂದ್ರ ಸಂವಹನ ಇಲಾಖೆಯ ರಾಮಕೃಷ್ಣ ಹಾಗೂ ಶಿವಮೊಗ್ಗ ಕೇಂದ್ರ ಸಂವಹನ ಇಲಾಖೆಯ ಲಕ್ಷ್ಮೀಕಾಂತ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
