ಮೈಸೂರು: ಜಿಲ್ಲಾ ಪಂಚಾಯಿತಿ ಇಲಾಖೆಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಇಲಾಖೆಯನ್ನು ವರ್ಗಾವಣೆಗೊಳಿಸಲು ಹೊರಟಿರುವ ಹುನ್ನಾರವನ್ನು ಖಂಡಿಸುತ್ತಾ ಕೂಡಲೇ ಇಂತಹ ನಿರ್ಣಯಗಳನ್ನು ಕೈ ಬಿಡಬೇಕೆಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪದವಿ ಪೂರ್ವ ಶಿಕ್ಷಣ ಬಹಳ ದೀರ್ಘಕಾಲದಿಂದ ಪ್ರತ್ಯೇಕ ವ್ಯವಸ್ಥೆಯಲ್ಲಿ ನೀಡುತ್ತಾ ಬಂದಿದೆ. ನಮ್ಮ ಜಿಲ್ಲೆಯ ಉಪನಿರ್ದೇಶಕ ಕಾರ್ಯನಿರ್ವಹಣೆಯನ್ನು ಜಿಪಂಗೆ ವಹಿಸಿ ಜಿಪಂ ಸಿಇಒ ಅವರ ನಿರ್ವಗಣೆ ನೋಡಿಕೊಳ್ಳುವಂತೆ ಹೊಸ ಸುತ್ತೋಲೆ ಹೊರಡಿಸಿದ್ದಾರೆ. ಇದು ಅವೈಜ್ಞಾನಿಕವಾಗಿದೆ. ಪಂಚಾಯತ್ ರಾಜ್ ಇಲಾಖೆಯಲ್ಲಿ ಶೇ.೪೨ ರಷ್ಟು ನೌಕರರ ಕೊರತೆಯಿದೆ. ಪಂಚಾಯತ್ ರಾಜ್ ಇಲಾಖೆಯ ಕಾರ್ಯಕ್ರಮಗಳೇ ನಿಗಧಿತ ಅವಧಿಯಲ್ಲಿ ಮಾಡಲು ಆಗುತ್ತಿಲ್ಲ. ಹೀಗಿರುವಾಗಲೇ ಶಿಕ್ಷಣ ಇಲಾಖೆ ಆಡಳಿತ ವಿಭಾಗವನ್ನು ಹೆಚ್ಚುವರಿಯಾಗಿ ನೀಡುವುದರಿಂದ ವಿಳಂಬ ನೀತಿ ಹೆಚ್ಚಳ ಆಗಲಿದೆ. ಪದವಿಪೂರ್ವ ಶಿಕ್ಷಣ ಇಲಾಖೆಗೆ ಜಡತ್ವ ಉಂಟಾಗಲಿದೆ ಎಂದು ಹೇಳಿದರು.
ಸದರಿ ಸುತ್ತೋಲೆ ಬಗ್ಗೆ ವಿಧಾನಸಭೆ ಹಾಗೂ ಪರಿಷತ್ನಲ್ಲಿ ಚರ್ಚೆಗೆ ತಾರದೇ ಎಕಾಎಕಿ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಲಾಭ ಆಗುವುದಿಲ್ಲ. ಬದಲಿಗೆ ನಷ್ಟ ಹೆಚ್ಚಾಗಲಿದೆ ಎಂದರು. ಪಿಯುಸಿ ಪರೀಕ್ಷೆಗಳನ್ನು ಎಸ್ಎಸ್ಎಲ್ಸಿ ಪರೀಕ್ಷಾಂಗ ವಿಭಾಗಕ್ಕೆ ವಹಿಸಿದ ಮೇಲೆ ಸರಿಯಾದ ರೀತಿಯಲ್ಲಿ ಪರೀಕ್ಷೆ ನಡೆಯುತ್ತಿಲ್ಲ. ಮೌಲ್ಯ ಮಾಪನ ದರ ಭತ್ಯೆ ಮೊದಲಾದ ವ್ಯವಸ್ಥೆಗಳು ಸರಿಯಾಗಿ ಆಗುತ್ತಿಲ್ಲ. ಹೀಗೆ ವಹಿಸುವುದರಿಂದ ಗುಣಾತ್ಮಕ ಶಿಕ್ಷಣಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಈಗ ಯಾವುದೇ ಅಧಿಕಾರ ಕೊಟ್ಟಿಲ್ಲವೆಂದು ಹೇಳಿದರೂ ಶಾಸನ ಬದ್ಧ ಅಧಿಕಾರ ಕೊಡುವ ಹುನ್ನಾರ ಇದಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸದೇ ಇಂತಹ ಸುತ್ತೋಲೆಗಳನ್ನು ವಾಪಾಸ್ಪಡೆಯಬೇಕೆಂದು ಒತ್ತಾಯಿಸಿದರು.
ಹಿಂದಿನ ಅವಧಿಯಲ್ಲಿ ಪಡುವಾರಹಳ್ಳಿಯಲ್ಲಿಯೂ ಬಾಕಿ ಉಳಿದಿರುವ ಕಾಮಗಾರಿಗೆ ೪೨ ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ. ೧೧ ಸಾವಿರ ವಿದ್ಯಾರ್ಥಿನಿಯರು ಮಹಾರಾಣಿ ವಾಣಿಜ್ಯ, ವಿಜ್ಞಾನ ಹಾಗೂ ಕಲಾ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಒಟ್ಟಾರೆ ೨೦೯ ಕೋಟಿ ರೂ.ಗಳ ಅನುದಾನ ನೀಡುವ ಭರವಸೆ ನೀಡಿ ಈಡೇರಿಸುತ್ತಿರುವುದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದರು. ಕಾಂಗ್ರೆಸ್ ಮುಖಂಡ ಜಯರಾಂ ಕೀಲಾರ ಗೋಷ್ಠಿಯಲ್ಲಿದ್ದರು.