ಗುಂಡ್ಲುಪೇಟೆ: ವಾಲ್ಮೀಕಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕೆಂದು ಮಾನವ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ನಾಯಕ ಜನಾಂಗದ ಮುಖಂಡ ನಾಗೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಪಟ್ಟಣದ ಖಾಸಗೀ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಎಸ್.ಸಿ.ಬಸವರಾಜು ಮೈಸೂರು ಹಾಗೂ ಚಾಮರಾಜನಗರ ಭಾಗದಲ್ಲಿ ನಾಯಕ ಸಮುದಾಯದ ಪ್ರಭಾವಿ ರಾಜಕಾರಣಿಯಾಗಿದ್ದಾರೆ. ಜೊತೆಗೆ ವರುಣಾ ಹಾಗು ನಂಜನಗೂಡಿನಲ್ಲಿ ಕಾಂಗ್ರೆಸ್ ಪಕ್ಷದ ಪರ ನಾಯಕ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಬೀಳಲು ಇವರ ಪಾತ್ರ ದೊಡ್ಡದು. ಇದನ್ನು ಪರಿಗಣಿಸಿ ಎಸ್.ಸಿ.ಬಸವರಾಜು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಮೈಸೂರು ಹಾಗು ಚಾಮರಾಜನಗರ ಭಾಗದಲ್ಲಿ ನಾಯಕ ಸಮುದಾಯಕ್ಕೆ ದೊಡ್ಡಮಟ್ಟದ ನಾಯಕತ್ವದ ವ್ಯಕ್ತಿ ಇಲ್ಲದ ಕಾರಣ ಸಮುದಾಯ ಹಂಚಿಹೋಗಿದೆ. ಎಸ್.ಸಿ.ಬಸವರಾಜು ಅವರನ್ನು ವಿಧಾನ ಪರಿಷತ್ ಸ್ಥಾನ ಆಯ್ಕೆ ಮಾಡಿದರೆ ಈ ಭಾಗದಲ್ಲಿ ಸಮಾಜಕ್ಕೆ ಹೆಚ್ಚಿನ ಬಲ ಬಂದು ಕಾಂಗ್ರೆಸ್ ಪರ ನಿಲ್ಲುತ್ತದೆ. ಇದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಭಾವ ಬಿರುತ್ತದೆ ಎಂದು ತಿಳಿಸಿದರು.
ಎಸ್.ಸಿ.ಬಸವರಾಜು ಈ ಹಿಂದೆ ವಾಲ್ಮೀಕಿ ನಿಗಮದ ಅಧ್ಯಕ್ಷರು ಹಾಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಸಾಕಷ್ಟು ಅನುಭವವಿದೆ. ಮೈಸೂರು-ಚಾಮರಾಜನಗರದಲ್ಲಿ ಹೆಚ್.ಡಿ.ಕೋಟೆ ಹೊರತು ಪಡಿಸಿ ಬೇರೆಲ್ಲು ನಾಯಕ ಸಮುದಾಯಕ್ಕೆ ಮಾನ್ಯತೆ ಸಿಕ್ಕಿಲ್ಲ. ಆದ್ದರಿಂದ ಈ ಬಾರಿ ನಾಯಕ ಸಮುದಾಯದವರು ಸಂಘಟಿತರಾಗುವ ಜೊತೆಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಎಸ್.ಸಿ.ಬಸವರಾಜು ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಗೋಷ್ಟಿಯಲ್ಲಿ ಸರಗೂರಿನ ಕುಮಾರ್, ರವಿಕಾಂತ್, ರವಿ, ರಮೇಶ್, ಚಿನ್ನಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.