ಮಂಡ್ಯ: ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡುವುದರಿಂದ ಮಕ್ಕಳು ಸುಲಭವಾಗಿ ವಿಚಾರಗಳನ್ನು ಗ್ರಹಿಸುವುದರ ಜೊತೆಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಬಹಳ ಅವಕಾಶಗಳಿವೆ ಎಂದು ಕೋಣಸಾಲೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸೋಮಶೇಖರ್ ಹೇಳಿದರು.
ತಾಲ್ಲೂಕಿನ ಕೋಣಸಾಲೆ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಜೊತೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ.ಚಂದು ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಂಗ್ಲಭಾಷೆಯ ವ್ಯಾಮೋಹದಿಂದ ಪೋಷಕರು ಮಕ್ಕಳಿಗೆ ಮಾನಸಿಕವಾಗಿ ಒತ್ತಡ ತರುತ್ತಿದ್ದು, ಇದರಿಂದ ನೈಜ ಪ್ರತಿಭೆ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದ ಅವರು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಮಕ್ಕಳು ಉತ್ತಮ ಸಾಧನೆಗಳಿಸಿ ಅತ್ಯುತ್ತಮ ಹುದ್ದೆಗೇರಿರುವುದನ್ನು ನಾವು ಕಾಣಬಹುದಾಗಿದೆ ಎಂದರು.
ದೇಶದಲ್ಲಿ ಯಾವುದೇ ಭಾಷೆಯು ಗಳಿಸಲಾಗದಷ್ಟು ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಕನ್ನಡ ಭಾಷೆ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ್ದು, ಮಕ್ಕಳು ಕೀಳರಿಮೆಯನ್ನು ಬಿಟ್ಟು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ನಡೆಸಿ ಕನ್ನಡ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ಜೊತೆಗೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಇದೇ ವೇಳೆ ಶಿಕ್ಷಣ ಕ್ಷೇತ್ರದ ಸೇವೆಗಾಗಿ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ.ಚಂದು ಅವರನ್ನು ತವರೂರಿನ ಪರವಾಗಿ ಗ್ರಾಮಸ್ಧರು ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ.ಟಿ.ಚಂದು ಎಚ್.ಕೆ.ವೀರಣ್ಣಗೌಡ ಅವರ ಮಾರ್ಗದರ್ಶನ ನನಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಕಾರಿ ಎಂದ ಅವರು, ಕರ್ನಾಟಕ ಎಂದು ನಾಮಕರಣಗೊಂಡ ೫೦ನೇ ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ತುಂಬಾ ಸಂತೋಷವಾಗಿದ್ದು, ಈ ಸಂದರ್ಭದಲ್ಲಿ ನಮ್ಮ ಹುಟ್ಟೂರಿನ ಗ್ರಾಮಸ್ಧರು ನನ್ನನ್ನು ಅಭಿನಂದಿಸುತ್ತಿರುವುದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಭಾವುಕಗೊಂಡರು.
ಈ ವೇಳೆ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಹೆಚ್.ಎಸ್.ರವಿಕುಮಾರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸೋಮಶೇಖರ್, ಶೇಖರ್ ಗ್ರಾಮದ ಮುಖಂಡರಾದ ಕೆಂಪಣ್ಣ, ಪುಟ್ಟಸ್ವಾಮಿ, ಸಿದ್ದರಾಮು, ರಾಜು, ದಯಾನಂದ, ಪ್ರೇಮಾನಂದ, ಕುಮಾರ್, ಸುನೀಲ್ ಕುಮಾರ್, ನಿಂಗೇಗೌಡ, ಶಿಕ್ಷಕರಾದ ವೆಂಕಟರಾಯಪ್ಪ, ರವಿ, ಸುರೇಶ್, ಡಾ.ಮಲ್ಲಿಕೇಶ, ಬಾಳೆಭಾಷ, ಶೋಭ, ಶ್ವೇತ, ನಂದಿನಿ, ರೂಪ ಸೇರಿದಂತೆ ಇತರರು ಹಾಜರಿದ್ದರು.