ಬೆಂಗಳೂರು : ರಾಸಾಯನಿಕ ದುರಂತಗಳು ಜಿಲ್ಲೆಯಲ್ಲಿ ಜರುಗದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ಈ ರೀತಿಯ ಘಟನೆಗಳು ಆಕಸ್ಮಿಕವಾಗಿ ನಡೆದಾಗ ಯಾವ ಯಾವ ಇಲಾಖೆಗಳ ಹಾಗೂ ಸಾರ್ವಜನಿಕರ ಪಾತ್ರವೇನು ಎಂಬುದನ್ನು ತಿಳಿದುಕೊಂಡರೆ ಇಂತಹ ವಿಪತ್ತುಗಳಿಂದಾಗುವ ದೊಡ್ಡ ಅನಾಹುತಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಕೆ.ಕೃಷ್ಣಮೂರ್ತಿ ಅವರು ತಿಳಿಸಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲೆ ಹಾಗೂ ಗೇಲ್ ಗ್ಯಾಸ್ ಸಂಸ್ಥೆಯ ಸಹಯೋಗದೊಂದಿಗೆ ಯಲಹಂಕ ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾಮ, ಗೇಲ್ ಗ್ಯಾಸ್ ಲಿಮಿಟೆಡ್, ಕೊಕೊ ಸಿಎನ್ ಜಿ ಸ್ಟೇಷನ್ ನಲ್ಲಿ ಹೊರ ವಲಯದ ತುರ್ತು ಅಣುಕು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ರೀತಿಯ ರಾಸಾಯನಿಕ ವಿಪತ್ತು ಸಂಭವಿಸಿದಲ್ಲಿ ಇದನ್ನು ನಿಯಂತ್ರಿಸುವ ಬಗ್ಗೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಬಗ್ಗೆ ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವ ಕುರಿತಂತೆ ಅಣುಕು ಪ್ರದರ್ಶನ ಸಹಕಾರಿಯಾಗುತ್ತದೆ ಎಂದರು.
ಇಂದು ನಡೆದ ಅಣಕು ಕಾರ್ಯಾಚರಣೆಯ ಮೂಲಕ ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೈಜ ಚಿತ್ರಣ ದೊರೆತಿದೆ. ಅಣಕು ಕಾರ್ಯಚರಣೆ ಆದರೂ ಸಿಬ್ಬಂದಿ ಅತ್ಯಂತ ಕ್ಷಿಪ್ರಗತಿಯಲ್ಲಿ ಸ್ಪಂದಿಸಿ, ಕರ್ತವ್ಯ ನಿರ್ವಹಿಸಿದ್ದಾರೆ ಜೊತೆಗೆ ಇಂತಹ ಅನಾಹುತಗಳು ಎದುರಾದಾಗ ಅದನ್ನ ೧೫ ನಿಮಿಷದಲ್ಲೆ ನಿಯಂತ್ರಿಸುವುದು ಹೇಗೆ ಅನ್ನೂವ ಬಗ್ಗೆಯು ತಜ್ನರು ಹಾಗೂ ಸಿಬ್ಬಂದಿ ಮಾಡಿ ತೋರಿಸಿಕೊಟ್ಟರು ಎಂದು ಹೇಳಿದರು. ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿಭಾಗಾಧಿಕಾರಿ ಪ್ರಮೋದ್ ಪಟ್ಟಿ, ಯಲಹಂಕ ತಹಶೀಲ್ದಾರ್ ಅನಿಲ್ ಕುಮಾರ್, ಕಾರ್ಖಾನೆಗಳು ಮತ್ತು ಬಾಯ್ಲರ್ಗಳ ಉಪನಿರ್ದೇಶಕ ಸೋಮಶೇಖರ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.