ಮೈಸೂರು: ರೈತನು ಈಗ ಕೇವಲ ಅನ್ನದಾತ ಮಾತ್ರವಲ್ಲ ಆತ ಶಕ್ತಿದಾತನೂ ಆಗಿದ್ದಾನೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಇಂದು ಮಂಗಳವಾರ ನೊಯಿಡಾದ ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಆಕಾಡೆಮಿಯಲ್ಲಿ ಸೀಪಾ ಸಂಸ್ಥೆ ಆಯೋಜಿಸಿದ್ದ ಸುಸ್ಥಿರ ಭಾರತ -೨೦೨೩ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ತಿಳಿಸಿದರು.
ಭಾರತದಲ್ಲಿ ಇಂದು ಎಥಿನಾಲ್ ಬಳಕೆ ಹೆಚ್ಚುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಕಡಿಮೆಯಾಗುತ್ತಿದೆ. ರೈತರು ರಸಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು. ಇದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತಪರಿಣಾಮವನ್ನು ಬೀರುತ್ತದೆ. ರಾಸಾಯನಿಕಗಳಿಗೆ ಬದಲಾಗಿ ಸಾವಯವ ಕೃಷಿ ಪದ್ದತಿಯನ್ನು ಳವಡಿಸಿಕೊಳ್ಳಬೇಕು. ಇದರಿಂದ ಜನರ ಆರೋಗ್ಯವು ಉತ್ತಮವಾಗಿರುತ್ತದೆ. ಆಗ ಸದೃಢವಾದ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ. ಜಗತ್ತಿನಲ್ಲಿ ಯಾವ ವಸ್ತುವಾಗಲಿ, ವ್ಯಕ್ತಿಯಾಗಲಿ ಅನವಶ್ಯಕವಲ್ಲ. ಆದರೆ ಅವುಗಳನ್ನು ಹೇಗೆ ಬಳಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಪರಿಸರಕ್ಕೆ ಪೂರಕವಾದ ಸೌರ, ವಾಯು ಶಕ್ತಿಯನ್ನು ಹೆಚ್ಚು ಬಳಸಬೇಕು.ಶ್ರೀ ಸುತ್ತೂರು ಮಠವು ಆಧ್ಯಾತ್ಮ ಮತ್ತು ವಿಜ್ಞಾನದ ಸಮ್ಮಿಲನದ ಕೇಂದ್ರವಾಗಿದೆ. ಎರಡನ್ನೂ ಸಮತೋಲನಗೊಳಿಸಿಕೊಂಡು ಸಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಸುತ್ತೂರು ಮಠದ ಪರಮ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ ಪ್ರಕೃತಿ ಮತ್ತು ಮಾನವನ ನಡುವೆ ಸಾಮರಸ್ಯದ ಸಹಬಾಳ್ವೆಯನ್ನು ಸೃಷ್ಟಿಸಲು ನಾವೀನ್ಯತೆಯನ್ನು ಅಳವಡಿಸಿಕೊಳ್ಳಬೇಕಿದೆ. ಕನಸುಗಳು ಮತ್ತು ಆಕಾಂಕ್ಷೆಗಳೊಂದಿಗೆ ಸುಸ್ಥಿರ ಭವಿಷ್ಯಕ್ಕಾಗಿ ಒಂದಾಗಿ ಸಾಗಬೇಕಿದೆ. ಸುಸ್ಥಿರತೆ ಎಂಬುದು ಇಂದುಅತ್ಯಂತ ಅರ್ಹವಾದ ನಿರ್ಣಾಯಕ ವಿಷಯವಾಗಿದೆ. ಎಲ್ಲಾ ಜೀವಿಗಳು ಇದನ್ನು ತಮ್ಮಆದ್ಯತೆಯಾಗಿ ಪರಿಗಣಿಸಬೇಕು.
ಇಂತಹ ಸಮ್ಮೇಳನಗಳು ಪ್ರಕೃತಿ ಮತ್ತು ಆರ್ಥಿಕ ಅಭಿವೃದ್ಧಿಯ ನಡುವೆ ಸಾಮರಸ್ಯವನ್ನುತರುವದರೊಂದಿಗೆ, ಸರ್ಕಾರ ಮತ್ತು ಸಮಾಜದ ಬದ್ಧತೆಯನ್ನು ಹೆಚ್ಚಿಸುತ್ತವೆ. ಸ್ಥಿರ ಭಾರತಕ್ಕಾಗಿ ಸೀಪಾದಂತಹ ಸಂಸ್ಥೆಗಳು ಕೈಗೊಳ್ಳುತ್ತಿರುವ ಜಾಗೃತಿಯ ಕಾರ್ಯಕ್ರಮಗಳು ಶ್ಲಾಘನೀಯಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಪ್ರೊ.ಆರ್.ಪಿ.ಗುಪ್ತಾ,ಸೀಪಾ ಅಧ್ಯಕ್ಷ ಡಾ.ರಘುರಾಮ್ ಅರ್ಜುನನ್, ಎಪಿಜೆ ಅಬ್ದುಲ್ ಕಲಾಂ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ಜೆ.ಪಿ.ಪಾಂಡೆರವರುಗಳು ಮಾತನಾಡಿದರು. ಡಾ. ಸಿ.ಜಿ. ಬೆಟಸೂರಮಠರವರು ಸ್ವಾಗತಿಸಿದರು. ಪ್ರೊ.ಅಮರ್ಜಿತ್ ಸಿಂಗ್ ವಂದಿಸಿದರು. ಪರವೀಣ್ ಪೊನ್ತರೆಂಗ್ ನಿರೂಪಿಸಿದರು.