ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಿವೃತ್ತ ಐ.ಎ.ಎಸ್.ಅಧಿಕಾರಿಗಳು, ಗಡಿನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಸಾಹಿತಿಗಳು ಹಾಗೂ ವಾಗ್ಮಿಗಳು ಆದ ಡಾ. ಸಿ. ಸೋಮಶೇಖರ್ರವರನ್ನು ನೇಮಿಸಲಾಗಿದೆ. ಸಿ. ಸೋಮಶೇಖರ್ರವರು ಈ ಹಿಂದೆಯೂ ಕಾರ್ಯಾಧ್ಯಕ್ಷರಾಗಿ ಕೆಲವು ಕಾಲ ಸೇವೆ ಸಲ್ಲಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ೧೯೮೬ರಲ್ಲಿ ಪ್ರಾರಂಭವಾಯಿತು. ಕರ್ನಾಟಕ ಹಾಗೂ ಹೊರ ರಾಜ್ಯಗಳಲ್ಲಿ ಘಟಕಗಳನ್ನು ಹೊಂದಿದೆ. ಕದಳಿ ಮಹಿಳಾ ವೇದಿಕೆಯು ಇದರ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ಶರಣ ಸಾಹಿತ್ಯ ಪ್ರಸಾರ, ಪ್ರಕಟಣೆ, ವಿಚಾರ ಸಂಕಿರಣಗಳು, ಸಮ್ಮೇಳನಗಳು, ದತ್ತಿ ಉಪನ್ಯಾಸಗಳು, ಇತ್ಯಾದಿ ಬಹುಮುಖವಾಗಿ ಸೇವೆ ಸಲ್ಲಿಸುತ್ತಿದೆ.
ಡಾ. ಸಿ. ಸೋಮಶೇಖರ್ರವರು ನೂತನ ಅಧ್ಯಕ್ಷರಾಗಿ ಇದೇ ೨೩ರ ಗುರುವಾರ ಮಧ್ಯಾಹ್ನ ೩.೦೦ ಗಂಟೆಗೆ ಅಧಿಕಾರ ಸ್ವೀಕರಿಸಲಿದ್ದಾರೆ. ಪರಿಷತ್ತಿನ ಗೌರವ ಸಲಹೆಗಾರರಾದ ಶ್ರೀ ಗೊ.ರು. ಚನ್ನಬಸಪ್ಪನವರು ಹಾಗೂ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಅಪ್ಪಾರಾವ ಅಕ್ಕೋಣೆಯವರು ಉಪಸ್ಥಿತರಿರುತ್ತಾರೆ. ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸದಸ್ಯರು ಆಗಮಿಸಬೇಕಾಗಿ ಕೋರಿಕೆ.