ಟಿ. ನರಸೀಪುರ: ದೇಶದಲ್ಲಿ ಬಿ.ಜೆ.ಪಿ. ಸರ್ಕಾರ ಬಂದ ಮೇಲೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ವರುಣಾ ಕ್ಷೇತ್ರದಲ್ಲಿಯೂ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿಗಿರುವುದರಿಂದ ಈ ಭಾಗದಲ್ಲಿ ಯಾವುದಾದರೊಂದು ಕಂಪನಿಯ ಕಾರ್ಖಾನೆ ತರಲು ಪ್ರಯತ್ನ ಮಾಡುತ್ತೇನೆಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರದ ಹುಣಸೂರು, ಬಿಳಿಗೆರೆಹುಂಡಿ, ಕಿರಗಸೂರು, ಮನ್ನೆಹುಂಡಿ, ಕೂಡ್ಲೂರು, ಡಣಾಯಕಪುರ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಕಳೆದ ಮೂರುಕಾಲು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಯಾವುದೇ ಅನುಧಾನ ನೀಡದೆ ಇದ್ದುದರಿಂದ ಸಮಸ್ಯೆಗಳು ಹೆಚ್ಚಾಗಿದ್ದು ಈಗ ನಿಮ್ಮೆಲ್ಲರ ಆಶೀರ್ವಾದದಿಂದ ಸಿದ್ದರಾಮಯ್ಯರವರು ೨ನೇ ಭಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಬಿಳಿಗೆರೆ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆ ಕೇಳಿದ್ದೀರಿ, ಯುವಕರಿಗೆ ಕೆಲಸ, ಲೈಬ್ರರಿ, ಪಶುಆಸ್ಪತ್ರೆ, ಅಲ್ಲದೆ ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ಮಾಡಲು ತಿಳಿಸಿದ್ದೀರಿ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸುವುದಾಗಿ ತಿಳಿಸಿದ ಅವರು ಅಧಿಕಾರಿಗಳು ಚೆನ್ನಾಗಿ ಜವಾಬ್ದಾರಿಯಿಂದ ಕೆಲಸ ಮಾಡಿದರೆ ಜನರು ನಮ್ಮ ಬಳಿಗೆ ಬರುವುದಿಲ್ಲ. ನೀವುಗಳು ನಿಗದಿತ ಸಮಯದಲ್ಲಿ ಜನರ ಸಮಸ್ಯೆಗೆ ಪರಿಹಾರ ಕಂಡುಹಿಡಿದು ಅವರನ್ನು ಕಛೇರಿಯಿಂದ ಕಛೇರಿಗೆ ಅಲೆಯುವುದನ್ನು ತಪ್ಪಿಸಬೇಕು ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುರೇಶ್ ಆಚಾರ್, ಇಓ ಸಿ. ಕೃಷ್ಣ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್ಕುಮಾರ್, ನಾಗರಾಜು, ಅಧಿಕಾರಿಗಳಾದ ಕೋಮಲ, ರಾಜಣ್ಣ, ಶಾಂತ, ಜಿ.ಪಂ. ಮಾಜಿ ಸದಸ್ಯ ಮಹಾದೇವ, ತಾ.ಪಂ. ಮಾಜಿ ಅಧ್ಯಕ್ಷೆ ಮಂಜುಳ ಮಂಜುನಾಥ್, ವೆಂಕಟೇಶ, ಮಹಾದೇವಸ್ವಾಮಿ, ಬಸವಣ್ಣ, ರಮೇಶ್, ಗ್ರಾ.ಪಂ. ಅಧ್ಯಕ್ಷೆ ಚಂದ್ರಮ್ಮ ಮಹಾದೇವಣ್ಣ ಹಾಜರಿದ್ದರು.