ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಸೃಜನಶೀಲ ಕಲಾ ತಂಡ ಎಂದೇ ಹೆಸರಾದ ಬನ್ನಿಕೊಪ್ಪದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೇ ಕಲಾರಂಗ ಸಂಸ್ಥೆಯಿಂದ ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಇತ್ತೀಚೆಗೆ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಹೊಸ ತಲೆಮಾರಿನ ರಂಗ ಕಲಾವಿದೆ, ರಂಗತಜ್ಞೆ ಸುಧಾ ಮುತ್ತಾಳ ನಾಯಕತ್ವದಲ್ಲಿ ಕಲಾ ತಂಡದ ಎಲ್ಲ ಸದಸ್ಯರು ಮನೋಜ್ಞವಾಗಿ ಹಾಡು ನಾಟಕಗಳನ್ನು ಪ್ರದರ್ಶಿಸುತ್ತಾ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಗಂಗಾವತಿ ತಾಲೂಕಿನ ಈಳಿಗನೂರು, ಜಮಾಪುರ, ಬಸರಿಹಾಳ, ವಿಠಲಾಪುರ ಸೇರಿದಂತೆ ನಾನಾ ಕಡೆಗೆ ಕಾರ್ಯಕ್ರಮ ನಡೆಸಿ ಗರ್ಭಿಣಿಯರ ಆರೈಕೆ, ತಾಯಿ ಮಗುವಿನ ಆರೋಗ್ಯ, ಕ್ಷಯ ರೋಗದ ನಿಯಂತ್ರಣ, ಸಾಂಕ್ರಾಮಿಕವಾಗಿ ಮತ್ತು ಅಸಾಂಕ್ರಾಮಿಕವಾಗಿ ಹರಡುವಂತ ಕಾಯಿಲೆಗಳ ಬಗ್ಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಬರುವಂತ ಎಲ್ಲಾ ಯೋಜನೆಗಳ ಬಗ್ಗೆ ಮತ್ತು ಬೇರೆ ಬೇರೆ ಕಾಯಿಲೆಗಳು ಹರಡುವ ರೀತಿ, ಅದರಿಂದ ಮುಂಜಾಗ್ರತೆ ವಹಿಸುವುದರ ಬಗ್ಗೆ ಬೀದಿ ನಾಟಕದ ಮುಖಾಂತರ ಜನರಿಗೆ ಆರೋಗ್ಯ ಜಾಗೃತಿ ಮೂಡಿಸಲಾಯಿತು.
ಜನಜಾಗೃತಿ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯ ಗಂಗಾವತಿ ತಾಲೂಕು ಅಧಿಕಾರಿಗಳಾದ ಗುರುರಾಜ್ ಹಿರೇಮಠ, ಪಂಪಾಪತಿ ಹೈಲಿ ಹಾಗೂ ಮಲ್ಲಿಕಾರ್ಜುನ ಕಮ್ಮಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ, ಕಲಾವಿದರು ಮತ್ತು ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದರು. ಜನಜಾಗೃತಿ ಕಾರ್ಯಕ್ರಮದಲ್ಲಿ ತಂಡದ ಮುಖ್ಯಸ್ಥರಾದ ಸುಧಾ ಮುತ್ತಾಳ, ವಿರೂಪಾಕ್ಷಪ್ಪ ಬೆದವಟ್ಟಿ, ಗೋಣಿಬಸಪ್ಪ ಅಗಳಕೇರಿ, ದೊಡಬಸಪ್ಪ ಮೊರ್ನಾಳ, ಶಾಂತಮ್ಮ ಹೊನ್ನುಣಸಿ, ನಾಗರಾಜ ಹಿರೇಮನ್ನಾಪುರ ಹಾಗೂ ರಾಜಾಸಾಬ ಕುಕನೂರ ಕಲಾವಿದರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.