ಮಂಡ್ಯ: ಮಂಡ್ಯ ನಗರದ ಕುಡಿಯುವ ನೀರಿನ ಪುರೈಕೆ ದರದ ಗೊಂದಲ ಬಗೆಹರಿದಿದ್ದು ಮಾಸಿಕ ೨೨೫ ರೂ ನಿಗಧಿ ಪಡಿಸಲಾಗಿದೆ. ಬೆಳಗಾವಿಯ ಸುವರ್ಣ ಸೌಧದ ,ಸಮಿತಿ ಕೊಠಡಿಯಲ್ಲಿ ಮಂಡ್ಯ ನಗರದ ನೀರು ಸರಬರಾಜಿನ ದರ ಹಾಗೂ ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶೇಷ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ನೀರಿನ ದರ ಅಂತಿಮ ಗೊಳಿಸಿದರು.
ಪೌರಾಡಳಿತ ಸಚಿವರಾದ ರೆಹೀಂ ಖಾನ್ ಹಾಗೂ ಮಂಡ್ಯ ಜಿಲ್ಲೆಯ ಶಾಸಕರ ಉಪಸ್ಥಿತಿಯಲ್ಲಿ ನಗರಾಭಿವೃದ್ಧಿ ಇಲಾಖೆ , ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳ ಸಭೆ ನಡೆಸಿದ ಚಲುವರಾಯಸ್ವಾಮಿ ಅವರು ಮಂಡ್ಯ ನಗರ ಹಾಗೂ ಇತರ ತಾಲ್ಲೂಕುಗಳ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಸೂಚಿಸಿದರು. ಮಂಡ್ಯ ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿನ ಪೂರೈಕೆ ದರ ನಿಗಧಿ ಸಮಸ್ಯೆ ಇದೆ ಈ ಹಿಂದೆ ಜಿಲ್ಲಾಧಿಕಾರಿಗಳ ಸಮಿತಿಯಲ್ಲಿ ೨೦೧೮ರಿಂದ ಅನ್ವಯವಾಗುವಂತೆ ೨೮೨ ರೂ ದರ ನಿಗದಿ ಪಡಿಸಲಾಗಿದೆ ಆದರೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದರ ಕಡಿಮೆ ಮಾಡಲು ಸೂಚಿಸಿದ್ದು ಅದರಂತೆ ೨೨೫ ರೂ ನಿಗಧಿ ಪಡಿಸುಲು ಚಲುವರಾಯಸ್ವಾಮಿ ಸೂಚಿಸಿದರು.
ಹಿಂದಿನ ಬಾಕಿ,ಬಡ್ಡಿ ವಸೂಲಾತಿ ಮತ್ತಿತರ ವಿಷಯಗಳನ್ಮು ಉಸ್ತುವಾರಿ ಸರ್ಕಾರದ ತೀರ್ಮಾನಕ್ಕೆ ಬಿಡಲಾಗುವುದು. ಸಾರ್ವಜನಿಕರಿಂದ ಮಾಮೂಲಿ ದರದಲ್ಲಿ ಬಾಕಿ ಹಣ ಪಡೆದು ನೀರು ಪೂರೈಸುವಂತೆ ಕೃಷಿ ಸಚಿವರು ಹೇಳಿದರು.
ಅನಧಿಕೃತ ಸಂಪರ್ಕ ಪಡೆದವರಿಗೆ ನೋಟಿಸ್ ನೀಡಿ ಸೂಕ್ತ ಶುಲ್ಕ ಪಡೆದು ಸಕ್ರಮಗೊಳಿಸಿ, ನೀರಿನ ಕರ ಶೇ ೧೦೦ ವಸೂಲಿ ಮಾಡಿ ಜೊತೆಗೆ ಯಾವುದೇ ಲೋಪವಿಲ್ಲದಂತೆ ನೀರು ಪೂರೈಸಿ ಎಂದು ಹೇಳಿದರು. ಇದೇ ವೇಳೆ ನಾಗಮಂಗಲದ ನೂತನ ವಾಣಿಜ್ಯ ಸಂಕೀರ್ಣದ ಹರಾಜು ಪ್ರಕ್ರಿಯೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ಹಿಂದೆ ಇದ್ದ ೨೯ ಮಂದಿ ವರ್ತಕರಿಗೆ ನ್ಯಾಯಾಲಯದ ಸೂಚನೆ ಮೇರೆಗೆ ಹೊಸ ದರದಂತೆ ಬಾಕಿ ಹಣ ಪಡೆದು ಮುಂದಿನ ನಾಲ್ಕು ವರ್ಷ ಅವಕಾಶ ಕಲ್ಲಿಸುವುದು ಇತರ ಮಳಿಗೆಗಳ ಪರಾಜು ಪ್ರಕ್ರಿಯೆ ನಡೆಸುವುದು ಮತ್ತು ಈ ೨೯ ಮಳಿಗೆಗಳನ್ನು ನಾಲ್ಕು ವರ್ಷಗಳ ನಂತರ ತೆರವುಗೊಳಿಸಿ ಹೊಸದಾಗಿ ಹರಾಜು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಂಡ್ಯ ನಗರದ ಕೆಲವು ಪ್ರದೇಶಗಳಲ್ಲಿ ಬಾಕಿ ಇರುವ ಒಳಚರಂಡಿ ವ್ಯವಸ್ಥೆ ಪೂರ್ಣ ಗೊಳಿಸಿ ವೈಜ್ಞಾನಿಕವಾಗಿ ತ್ಯಾಜ್ಯ ನೀರಿ ವಿಲೇವಾರಿ ಮಾಡಲು ಹಾಗೂ ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣ ವೈಜ್ಞಾನಿಕವಾಗಿ ಮಾಡುವಂತೆ ಸಚಿವರಾದ ಚಲುವರಾಯಸ್ವಾಮಿರವರು ಅಧಿಕಾರಿಗಳಿಗೆ ಸೂಚಿಸಿದರು. ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ ಕೃಷಿ ಸಚಿವರ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಗರಾಭಿವೃದ್ಧಿ ಇಲಾಖೆ ಆಯುಕ್ತರಾದ ಅಜಯ್ ನಾಗಭೂಷಣ್, ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾದ ಶರತ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾದ ಪ್ರಭುಲಿಂಗ ಕವಲಕಟ್ಟೆ, ಮತ್ತಿತರರು ಸಭೆಯಲ್ಲಿ ಹಾಜರಿದ್ದು ಚರ್ಚೆಯಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದರು.
ಕೃಷಿ ಸಚಿವರಿಗೆ ಶಾಸಕರ ಅಭಿನಂದನೆ:- ಸುದೀರ್ಘ ವರ್ಷಗಳಿಂದ ಕಗ್ಗಂಟಾಗಿದ್ದ ಮಂಡ್ಯ ನಗರದ ನೀರು ಸರಬರಾಜು ಮತ್ತು ದರ ಸಮಸ್ಯೆಯನ್ನು ಸುಗಮವಾಗಿ ಬಗೆ ಹರಿಸಿದ ಜಿಲ್ಲಾ ಉಸ್ತುವರಿ ಸಚಿವರು ಹಾಗೂ ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರಿಗೆ ಮಂಡ್ಯ ಶಾಸಕರಾದ ರವಿಕುಮಾರ್ ಪಿ ಅವರು ಸಭೆಯಲ್ಲಿ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಶಾಸಕರಾದ ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ ಹಾಗೂ ದರ್ಶನ ಪುಟ್ಟಣ್ಣಯ್ಯ ಅವರು ಹಾಜರಿದ್ದು ಸಲಹೆಗಳನ್ನು ನೀಡಿದರು.