ಕೆ.ಆರ್.ನಗರ: ಕಾಲೇಜನ್ನು ಎಲ್ಲಾ ರೀತಿಯಲ್ಲಿ ಅಭಿವೃದ್ದಿ ಪಡಿಸಲು ಬೇಕಾಗಿರುವ ಅನುದಾನ ತರಲು ಬದ್ದನಾಗಿದ್ದು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಉತ್ತಮವಾದ ಬೋಧನೆ ಮಾಡಿ ಶೈಕ್ಷಣಿಕವಾಗಿ ಅಭಿವೃದ್ದಿ ಕಾಣಲು ಸಹಕಾರ ನೀಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷನಾಗಿ ಸರ್ಕಾರದಿಂದ ಸವಲತ್ತು ಕೊಡಿಸಲು ಸಿದ್ದನಿದ್ದು ಉಪನ್ಯಾಸಕರು ಸಮಸ್ಯೆಗಳನ್ನು ಮುಕ್ತವಾಗಿ ತಿಳಿಸಬೇಕು ಎಂದರು.
ಕಾಲೇಜಿಗೆ ನ್ಯಾಕ್ ತಂಡ ಭೇಟಿ ನೀಡುವ ವೇಳೆಗೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲು ಅಗತ್ಯ ಕ್ರಮ ವಹಿಸಲಿದ್ದು ನಾಳೆಯಿಂದಲೇ ತುರ್ತು ಕಾಮಗಾರಿ ಆರಂಭಿಸಲಾಗುತ್ತದೆ ಎಂದ ಶಾಸಕರು ಕಾಲೇಜು ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಆಗಬೇಕಾಗಿರುವ ಕಾಮಗಾರಿಗಳನ್ನು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನ್ಯಾಕ್ ಶ್ರೇಣಿಯಲ್ಲಿ ಉತ್ತಮ ಸ್ಥಾನ ಗಳಿಸುವ ಗುರಿಯೊಂದಿಗೆ ಕಾರ್ಯ ಯೋಜನೆ ಹಾಕಿಕೊಂಡು ಬೋಧನಾ ವಿಧಾನವನ್ನು ಉತ್ತಮ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದ ಶಾಸಕರು ಕಾಲೇಜನ್ನು ರಾಜ್ಯದಲ್ಲಿಯೆ ಪ್ರಥಮ ಸ್ಥಾನಕ್ಕೇರಿಸುವ ವಿಚಾರದಲ್ಲಿ ಎಲ್ಲಾ ಸಹಾಯಕ್ಕೂ ಸಿದ್ದನಿದ್ದೇನೆಂದು ಭರವಸೆ ನೀಡಿದರು.
ಪ್ರಾಂಶುಪಾಲ ಡಾ. ಜಯಸುಬ್ಬಯ್ಯ ಮಾತನಾಡಿ ಕಾಲೇಜಿನಲ್ಲಿ ಕ್ಯಾಂಟೀನ್ ಸೌಲಭ್ಯ, ಸಮರ್ಪಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಚತೆ, ವಾಹನಗಳಿಗೆ ಪಾರ್ಕಿಂಗ್ ಅನುಕೂಲ ಸೇರಿದಂತೆ ಕಾಲೇಜು ಆವರಣದಲ್ಲಿ ಪುಂಡರ ಹಾವಳಿ ನಿಯಂತ್ರಿಸಲು ಪೊಲೀಸ್ ಬೀಟ್ ಮಾಡಿಸಬೇಕೆಂದು ಮನವಿ ಸಲ್ಲಿಸಿದರು.
ಸಮಸ್ಯೆಗಳನ್ನು ಆಲಿಸಿದ ಶಾಸಕ ಡಿ.ರವಿಶಂಕರ್ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಉಪನ್ಯಾಸಕರು ಪರಸ್ಪರ ಸಹಕಾರ ಮತ್ತು ಸಮನ್ವಯತೆಯಿಂದ ಕೆಲಸ ಮಾಡಬೇಕೆಂದು ಸಲಹೆ ನೀಡಿದರಲ್ಲದೆ ನಿಮ್ಮಲ್ಲಿರುವ ಆಂತರೀಕ ಬಿನ್ನಾಭಿಪ್ರಾಯ ಮರೆತು ಕೆಲಸ ಮಾಡಬೇಕೆಂದರಲ್ಲದೆ ಯಾವುದೇ ಬೇಡಿಕೆ ಮತ್ತು ಇತರ ಸವಲತ್ತುಗಳು ಬೇಕಿದ್ದರೆ ನನ್ನ ಗಮನಕ್ಕೆ ತರಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜು ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.