ಎಡತೊರೆ ಮಹೇಶ್
ಎಚ್ ಡಿ ಕೋಟೆ: ತಾಲೂಕಿನ ಸೊಳ್ಳೆಪುರ ಗ್ರಾಮದಲ್ಲಿರುವ ಏಕಲವ್ಯ ಶಾಲೆಯಲ್ಲಿ ಹಲವು ಅಕ್ರಮಗಳು ನಡೆಯುತ್ತಿವೆ. ಅಲ್ಲದೆ ದಲಿತ ಅಧಿಕಾರಿಯೊಬ್ಬರ ತೇಜೋವಧೆ ಮಾಡಲು ಯತ್ನಿಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಬೂದನೂರು ವೆಂಕಟೇಶ್ ಆರೋಪಿಸಿದ್ದಾರೆ.
ಎಚ್ ಡಿ ಕೋಟೆ ಪಟ್ಟಣದ ಪತ್ರಕರ್ತರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಏಕಲವ್ಯ ಶಾಲೆಯಲ್ಲಿ ನವೆಂಬರ್ 26ರಂದು ನಡೆಯಬೇಕಿದ್ದ ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಿಸದೆ ನವೆಂಬರ್ 27ರಂದು ಹಲವರ ಒತ್ತಾಯದ ಮೇರೆಗೆ ಆಚರಿಸಲಾಗಿದೆ. ಅಲ್ಲದೆ ಶಾಲೆಯ ಆವರಣದೊಳಗಿರುವ ಕೆರೆಯಲ್ಲಿ ಸರಿಸುಮಾರು ನಲವತ್ತಕ್ಕೂ ಹೆಚ್ಚು ಟ್ಯಾಕ್ಟರ್ ಕಲ್ಲುಗಳನ್ನು ಅಕ್ರಮವಾಗಿ ಬೇರಡೆ ಸಾಗಿಸಲಾಗಿದೆ. ಶಾಲೆಯ ವಿದ್ಯಾರ್ಥಿಗಳಿಗೆ ಇಲ್ಲಸಲ್ಲದ ವಿಚಾರಗಳನ್ನು ತಲೆಗೆ ತುಂಬಿಸಿ ಮಕ್ಕಳಿಂದ ಪ್ರತಿಭಟನೆ ಮಾಡುತ್ತಿರುವುದು ಕಂಡು ಬಂದಿದೆ ಎಂದು ಅಪಾದಿಸಿದರು.
ಅಲ್ಲದೆ 2021 22ನೇ ಸಾಲಿನಲ್ಲಿ ಏಕಲವ್ಯ ವಸತಿ ಶಾಲೆಯ ಪ್ರಾಂಶುಪಾಲರಾಗಿದ್ದ ದಲಿತ ಅಧಿಕಾರಿ ರಂಗನಾಥ ರವರನ್ನ ಪದೇ ಪದೇ ಭ್ರಷ್ಟ ಅಧಿಕಾರಿ ಎಂದು ಹೇಳುವ ಮೂಲಕ ಅವರ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶಿವಯ್ಯ ಎಡತೊರೆ ನಾಗರಾಜು ಬೂದನೂರು ರವೀಶ್ ಚಕ್ಕೋಡನಹಳ್ಳಿ ಶಿವಾಜಿ ತಿಮ್ಮರಾಜು ಎಡತೊರೆ ಶಿವರಾಜು ಹಾಜರಿದ್ದರು.