ಮಂಡ್ಯ: ವಿಜ್ಞಾನ ಅಧ್ಯಯನ ನಡೆಸುವ ವಿದ್ಯಾರ್ಥಿಗಳು ನಿರಂತರವಾಗಿ ಪರಿಶ್ರಮ ವಹಿಸಿ ಅಧ್ಯಯನ ನಡೆಸಿದರೆ ವಿಜ್ಞಾನ ಕ್ಷೇತ್ರದಲ್ಲಿ ವಿಶ್ವ ಮಾನ್ಯತೆ ಪಡೆಯಲು ಸಾಕಷ್ಟು ಅವಕಾಶಗಳಿವೆ ಎಂದು ಎಂ.ಹೆಚ್.ಚನ್ನೇಗೌಡ ವಿದ್ಯಾಸಂಸ್ಧೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಹೇಳಿದರು.
ಪಟ್ಟಣದ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ ಮಂಡ್ಯ ಲಯನ್ಸ್ ಸಂಸ್ಧೆಯ ಸಹಯೋಗದಲ್ಲಿ ಎಕ್ಸೆಲ್ ಅಕಾಡಮೆ ಸಂಸ್ಧೆ ಹೊರ ತಂದಿರುವ ವಿಜ್ಞಾನ ವಿಷಯಗಳ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.
ಜನ ಸಾಮಾನ್ಯರ ಜೀವನದಲ್ಲಿ ವಿಜ್ಞಾನವು ಬಹು ಮುಖ್ಯವಾಗಿದ್ದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಿಂಜರಿಕೆಯನ್ನ ಬಿಟ್ಟು ವಿಜ್ಞಾನ ವಿಷಯವನ್ನು ವ್ಯಾಸಂಗ ಮಾಡಿದರೆ ಉತ್ತಮ ಸ್ಧಾನ-ಮಾನ ಗಳಿಸುವುದರ ಜೊತೆಗೆ ಸಮಾಜ ಪೂರಕವಾದ ಅನ್ವೇಷಣೆಗಳನ್ನು ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಇಡೀ ವಿಶ್ವದಲ್ಲೇ ಅತೀ ಹೆಚ್ಚು ಪ್ರತಿಭಾನ್ವಿತ ವಿಜ್ಞಾನಿಗಳನ್ನು ಹೊಂದಿರುವ ದೇಶ ಭಾರತವಾಗಿದ್ದು ಇಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ವೈಯಕ್ತಿಕ ಜೀವನದ ಆಸೆಗಳಿಂದ ವಿದೇಶಗಳಿಗೆ ಫಲಾಯನವಾಗುತ್ತಿರುವುದು ವಿಷಾದನೀಯ ಎಂದ ಅವರು ವಿದ್ಯಾರ್ಥಿಗಳು ನಮ್ಮ ದೇಶದಲ್ಲೇ ನೆಲೆ ನಿಂತು ದೇಶವಾಸಿಗಳ ಅಭಿವೃದ್ದಿಗೆ ತಮ್ಮ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಪದವಿಪೂರ್ವ ಹಂತ ಬಹುಮುಖ್ಯವಾಗಿದ್ದು ಪರೀಕ್ಷಾ ಸಮಯ ಸಮೀಸುತ್ತಿರುವುದರಿಂದ ಉತ್ತಮ ಆರೋಗ್ಯಕರವಾದ ಪೋಷ್ಟಿಕ ಆಹಾರಗಳನ್ನು ಸೇವಿಸಿ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನ ಕಾಪಾಡುವುದರ ಮೂಲಕ ಶಿಕ್ಷಕರ ಮಾರ್ಗದರ್ಶನದಲ್ಲಿ ಪರೀಕ್ಷೆಯನ್ನ ಎದುರಿಸಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವುದರ ಮೂಲಕ ತಂದೆ-ತಾಯಿಗಳಿಗೆ ಹಾಗೂ ಸಂಸ್ಧೆಗೆ ಕೀರ್ತಿ ತರಬೇಕೆಂದು ಅವರು ಹೇಳಿದರು.
ಈ ವೇಳೆ ಪ್ರಾಂಶುಪಾಲರಾದ ಯು.ಎಸ್. ಶಿವಕುಮಾರ್, ಉಪ ಪ್ರಾಂಶುಪಾಲರಾದ ಜಿ.ಎಸ್.ನಂದಿನಿ, ಹಾಗೂ ಲಯನ್ಸ್ ಸಂಸ್ಧೆಯ ಸದಸ್ಯ ಸುರೇಶ್ಬಾಬು, ಉಪನ್ಯಾಸಕರುಗಳಾದ ಹೆಚ್.ಎಸ್.ಪಂಚಲಿಂಗೇಗೌಡ, ಎನ್.ರೇವಣ್ಣ, ಪ್ರೇಮಕುಮಾರಿ, ಸಿ. ಜಯವರ್ಧನ್, ನವೀನ್ಕುಮಾರ್, ಮೋಹನ್ಕುಮಾರ್ ಎಂ.ಟಿ, ಸಂಜನ, ರಶ್ಮಿ, ಸೇರಿದಂತೆ ಇತರರು ಹಾಜರಿದ್ದರು.