ಮೈಸೂರು : ಹೊಸ ವರ್ಷಾಚರಣೆ ಹಿನ್ನಲೆ ಮೈಸೂರಿಗೆ ಆಗಮಿಸುವ ಪ್ರವಾಸಿಗರ ಜೊತೆ ಸೌಜನ್ಯದಿಂದ ವರ್ತಿಸುವಂತೆ ಆಟೋ ಚಾಲಕರಿಗೆ ಪೊಲೀಸರು ಕಿವಿಮಾತು ಹೇಳಿದರು. ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಗರದ ಪುರಭವನದಲ್ಲಿ ನಡೆದ ಅರಿವು ಕಾರ್ಯಕ್ರಮದಲ್ಲಿ ದೇವರಾಜ ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ಮಾತನಾಡಿ, ಪ್ರವಾಸಿ ಕೇಂದ್ರವಾದ ಸಾಂಸ್ಕೃತಿಕ ನಗರಿ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಈ ವೇಳೆ ಯಾವುದೇ ರೀತಿ ತೊಂದರೆ ಆಗದಂತೆ ಎಚ್ಚರಿಕೆಯಿಂದ ವರ್ತಿಸಬೇಕೆಂದು ಸಲಹೆ ನೀಡಿದರು.
ಅವಸರದಲ್ಲಿ ಪ್ರಯಾಣಿಕರು ಪದಾರ್ಥಗಳನ್ನ ಆಟೋದಲ್ಲಿ ಮರೆತರೆ ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಮನವಿ ಮಾಡಿದರು. ಪ್ರಾಮಾಣಿಕತೆ ಮರೆವ ಚಾಲಕರಿಗೆ ಬಹುಮಾನ ನೀಡಲಾಗುವುದೆಂದು ತಿಳಿಸಿದರು. ಆಟೋ ಚಾಲನೆ ಮಾಡುವಾಗ ಸಮವಸ್ತ್ರ ಧರಿಸುವುದು, ಮೀಟರ್ ಬಳಸುವುದು ಸೇರಿದಂತೆ ಸಂಚಾರಿ ನಿಯಮಗಳನ್ನ ಪಾಲಿಸುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಲಷ್ಕರ್ ಠಾಣೆ ಇನ್ಸ್ಪೆಕ್ಟರ್ ಪ್ರಸಾದ್, ದೇವರಾಜ ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್, ಆಲನಹಳ್ಳಿ ಠಾಣೆ ಇನ್ಸ್ಪೆಕ್ಟರ್ ಶ್ರೀಕಾಂತ್ ಹಾಗೂ ಪಿಎಸ್ಸೈ ಗಳಾದ ಆನಂದ್, ಜೈಕೀರ್ತಿ, ಪ್ರಭು ಭಾಗವಹಿಸಿದ್ದರು.