-ಎಡತೊರೆ ಮಹೇಶ್
ಎಚ್.ಡಿ.ಕೋಟೆ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೇಟಿಕುಪ್ಪೆ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಭಾನುವಾರ ಕಲ್ಲಹಟ್ಟಿ ಗ್ರಾಮದಲ್ಲಿ ಹುಲಿ ದಾಳಿಗೆ ಬೆಲೆ ಬಾಳುವ ಹಸು ಮೃತಪಟ್ಟಿದೆ. ಕಲ್ಲಹಟ್ಟಿ ಗ್ರಾಮದ ನಾಗೇಗೌಡ ಎಂಬುವವರಿಗೆ ಸೇರಿದ ಹಸು ಭಾನುವಾರ ಹಗಲಿನ ವೇಳೆಯೇ ಹಸು ಹುಲಿ ದಾಳಿಗೆ ತುತ್ತಾಗಿದೆ, ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಸಹ ಯಾವುದೇ ಪ್ರಯೋಜನಾವಾಗಿಲ್ಲ, ಅರಣ್ಯ ಸಿಬ್ಬಂದಿ ಇತ್ತ ತಿರುಗಿಯೂ ನೋಡಿಲ್ಲ ಎಂದು ಹಸುವಿನ ಮಾಲೀಕ ನಾಗೇಗೌಡ ಆರೋಪಿಸಿದ್ದಾರೆ.
ಈಚೆಗೆ ಹುಲಿ ದಾಳಿಯಿಂದ ಅಗಸನಹುಂಡಿ ಗ್ರಾಮದಲ್ಲಿ ಮಗುವೊಂದು ಬಲಿಯಾಗಿತ್ತು, ಅಲ್ಲದೆ ಪಕ್ಕದ ಸಿದ್ದಾಪುರ ಗ್ರಾಮದಲ್ಲಿ ಹಸು ಸಹ ಬಲಿಯಾಗಿತ್ತು, ಇದನ್ನ ಮನಗಂಡು ಅರಣ್ಯ ಇಲಾಖೆ ೮೦ ಕ್ಕೂ ಹೆಚ್ಚು ನೌಕರರನ್ನು ಒಳಗೊಂಡು ಕಾರ್ಯಾಚರಣೆಯನ್ನು ನಡೆಸಿದ್ದರು, ಒಂದು ಹುಲಿ ಸೆರೆ ಹಿಡಿಯಲಾಯಿತು. ಆದರೂ ಹುಲಿಯ ಉಪಟಳ ನಿರಂತರವಾಗಿದೆ.
ಸೊಳ್ಳೆಪುರ ಎ ಮತ್ತು ಬಿ ಹಾಡಿಗಳ ವ್ಯಾಪ್ತಿಯಲ್ಲಿ ಹುಲಿ ನಿರಂತರವಾಗಿ ಓಡಾಟ ನಡೆಸುತ್ತಿದ್ದು ಈ ಭಾಗದಲ್ಲಿ ಜನರು ಜಾನುವಾರಗಳನ್ನು ಕಟ್ಟಿಕೊಂಡು, ತಮ್ಮ ಜಮೀನುಗಳಲ್ಲಿ ಬೇಸಾಯ ಮಾಡುತ್ತಿರುತ್ತಾರೆ, ಹುಲಿ ದಾಳಿಯಿಂದ ಮನುಷ್ಯರು ಬಲಿಯಾಗುವ ಸಾಧ್ಯತೆಯಿದ್ದು, ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡು, ಕಾಡಿನಿಂದ ಹೊರಬರುವ ಹುಲಿಗಳನ್ನು ಸೆರೆಹಿಡಿದು ಸಾರ್ವಜನಿಕರಿಗೆ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು.
-ನಟರಾಜು, ಆದಿವಾಸಿ ಮುಖಂಡ, ಸೊಳ್ಳೆಪುರ ಬಿ ಹಾಡಿ.