ಮೈಸೂರು: ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಮೂಲಕ ಸಂಸ್ಕೃತಿ, ಆಚಾರ, ವಿಚಾರಗಳನ್ನು ಕಲಿಸುವುದು ಮುಖ್ಯ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಎಸ್. ಫಾಲಾಕ್ಷರವರು ಮೈಸೂರಿನ ರಾಮಾನುಜ ರಸ್ತೆ ಜೆಎಸ್ಎಸ್ ಹಳೆಯ ಆಸ್ಪತ್ರೆ ಆವರಣದಲ್ಲಿರುವ ಜೆಎಸ್ಎಸ್ ವಿಶೇಷ ಚೇತನ ಉದ್ಯೋಗಸ್ಥ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ವಸತಿನಿಲಯದಲ್ಲಿ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ೩೦೮ನೇ ಶಿವಾನುಭವ ದಾಸೋಹ ಕಾರ್ಯಕ್ರಮದಲ್ಲಿ ನಡೆದ `ನೈತಿಕ ಶಿಕ್ಷಣ ಮತ್ತು ಆಧುನಿಕತೆ’ ಎಂಬ ವಿಷಯ ಕುರಿತು ಮಾತನಾಡುತ್ತಾ ತಿಳಿಸಿದರು.
ಇಂದಿನ ಮಕ್ಕಳು ಯಾಂತ್ರಿಕ ಜೀವನವನ್ನು ನಡೆಸುತ್ತಿದ್ದಾರೆ. ದೈಹಿಕವಾಗಿ ಸದೃಢವಾಗಿ ಬಲಗೊಳ್ಳಬೇಕಾದ ಅವಶ್ಯಕತೆ ಇದೆ. ಒತ್ತಾಯಪೂರ್ವಕವಾಗಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಬಾರದು. ಅವರ ಅಭಿರುಚಿ, ಆಸಕ್ತಿಗಳನ್ನು ಗ್ರಹಿಸಿ ಶಿಕ್ಷಣವಿತ್ತರೆ, ಅವರವರ ಕ್ಷೇತ್ರಗಳಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ. ಆಧುನಿಕತೆಗೆ ಒಗ್ಗಿಕೊಂಡು ಉತ್ತಮ ಶಿಕ್ಷಣ ನೀಡಲು ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸುತ್ತಿವೆ ಎಂದರು.
ವಿಶ್ರಾಂತ ಪ್ರಾಂಶುಪಾಲ ಡಾ. ಎಚ್. ಮುದ್ದುಮಲ್ಲೇಶ್ರವರು ಅಧ್ಯಕ್ಷತೆ ವಹಿಸಿದ್ದರು. ಗುರು ಸ್ವೀಟ್ ಮಾರ್ಟ್ನ ಮಹದೇವಮ್ಮನವರ ಸೇವಾರ್ಥ ಕಾರ್ಯಕ್ರಮ ನೆರವೇರಿತು. ಶಿವಶ್ರೀ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಹಾಗೂ ವಿಶೇಷಚೇತನ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು, ಶಿವರಾತ್ರೀಶ್ವರ ಅಕ್ಕನ ಬಳಗದ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಎನ್. ಚೂಡಾಮಣಿಯವರು ಪ್ರಾರ್ಥನೆ ಮಾಡಿದರು. ಎಂ.ಪಿ. ಸೌಂದರ್ಯಸ್ವಾಗತಿಸಿದರು. ಸಂಗೀತ ವಂದಿಸಿದರು. ಪಲ್ಲವಿ ನಿರೂಪಿಸಿದರು.