ಕೊಳ್ಳೇಗಾಲ : ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಣ ಮಾಡಲು ಯತ್ನಿಸಿದ್ದಾರೆಂಬ ಶಂಕೆಯ ಮೇರೆಗೆ ನಾಲ್ವರನ್ನು ತಾಲ್ಲೂಕಿನ ಮಧುವನಹಳ್ಳಿ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಕೇರಳ ಮೂಲದ ಆಯೂಬ್, ಇಸ್ಮಾಯಿಲ್, ಅಲಿ ಮತ್ತು ಉಮರ್ ಎಂಬುವವರು ಪೊಲೀಸರ ಅತಿಥಿಗಳಾಗಿದ್ದಾರೆ.
ಮಂಗಳವಾರ ಸಂಜೆ ಈ ನಾಲ್ವರು ಪಟ್ಟಣದಲ್ಲಿ ಭಿಕ್ಷೆ ಬೇಡುವ ಅಪ್ರಾಪ್ತ ಬಾಲಕಿಯೊಬ್ಬಳನ್ನು ಕಾರಿನಲ್ಲಿ ಕೂರಿಸಿಕೊಂಡು ಕೊಳ್ಳೇಗಾಲ-ಹನೂರು ಮಾರ್ಗವಾಗಿ ತೆರಳುತ್ತಿದ್ದರು. ಮಧುವನಹಳ್ಳಿಯ ಬಳಿ ಕಾರು ಸ್ಕೂಟರ್ ಒಂದಕ್ಕೆ ಡಿಕ್ಕಿಯಾಗಿದೆ. ಯಾವುದೇ ಅಪಾಯವಾಗಲಿಲ್ಲ.
ಆದರೆ, ಗ್ರಾಮಸ್ಥರು ಕಾರನ್ನು ಸುತ್ತುವರಿದು ವಿಚಾರಿಸಿದ್ದಾರೆ. ಬಾಲಕಿಯು ಪಟ್ಟಣದವಳು. ಯುವಕರು ಕೇರಳದವರು ಎಂಬುದು ತಿಳಿದು ಬಂದಿದೆ. ಕಾರಿನಲ್ಲಿದ್ದವರು ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದರು.
ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಯುವಕರನ್ನು ತರಾಟೆಗೆ ತೆಗೆದುಕೊಂಡು ಬಾಲಕಿ ಹಾಗೂ ನಾಲ್ವರನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬಳಿಕ ಗ್ರಾಮಾಂತರ ಠಾಣೆ ಪೊಲೀಸರು ಪಟ್ಟಣ ಠಾಣೆಗೆ ಪ್ರಕರಣ ವರ್ಗಾಯಿಸಿದ್ದಾರೆ. ಈ ಸಂಬಂಧ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
