ಬೆಂಗಳೂರು : ಹುಬ್ಬಳ್ಳಿಯ ಕರಸೇವಕ, ಗಲಭೆ ಆರೋಪಿ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ನಾಯಕರ ಪ್ರತಿಭಟನೆ ಗುರುವಾರವೂ ಮುಂದುವರಿದಿದೆ.
‘ನಾನೂ ರಾಮಭಕ್ತ, ನನ್ನನ್ನೂ ಬಂಧಿಸಿ ಸಿದ್ದರಾಮಯ್ಯನವರೇ’ ಎಂದು ಬಿಜೆಪಿ ನಾಯಕರು ಪ್ರೊಫೈಲ್ ಫೋಟೋ ಬದಲಿಸಿ ಸಾಮಾಜಿಕ ಜಾಲತಾಣಗಳಲ್ಲೂ ಹೋರಾಟ ಆರಂಭಿಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಅನೇಕ ನಾಯಕರು ಪ್ರೊಫೈಲ್ ಫೋಟೊ ಬದಲಾಯಿಸಿಕೊಂಡಿದ್ದಾರೆ.
ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ನಾನೊಬ್ಬ ಕರಸೇವಕ ನನ್ನನ್ನು ಬಂಧಿಸಿ ಎಂಬ ಅಭಿಯಾನ ಇಂದಿನಿಂದ ಶುರುವಾಗಿದೆ. ಕರಸೇವೆಯಲ್ಲಿ ಭಾಗಿಯಾದವರು ಇವತ್ತಿಗೂ ಇದ್ದಾರೆ. ರಾಮ ಮಂದಿರ ಉದ್ಘಾಟನೆ ಸಂಧರ್ಭದಲ್ಲೇ ಸರ್ಕಾರ ರಾಮ ಭಕ್ತರನ್ನು ಭಯ ಪಡಿಸುವ ಕೆಲಸ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ರಾಮ ಭಕ್ತರನ್ನು ಕ್ರಿಮಿನಲ್ ಗಳಿಗೆ ಹೋಲಿಕೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡುವವರು ಕಾಂಗ್ರೆಸ್ ಗೆ ಅಮಾಯಕರು. ರಾಜ್ಯದ ಹಿಂದೂಗಳ ಪಾಲಿಗೆ ಈ ಸರ್ಕಾರ ಸತ್ತು ಹೋಗಿರುವ ತರಹ ಕಾಣಿಸುತ್ತಿದೆ. ಕೇವಲ ಅಲ್ಪಸಂಖ್ಯಾತರನ್ನು ವೈಭವೀಕರಿಸುವುದರಲ್ಲಿ ತುಷ್ಟೀಕರಣ ಮಾಡುವುದರಲ್ಲಿ ಸರ್ಕಾರ ನಿರತವಾಗಿದೆ. ನನ್ನ ಮೇಲೂ ಹತ್ತಾರು ಕೇಸ್ ಗಳಿವೆ. ಹಾಗಾದರೆ ನಾನು ಅಪರಾಧಿಯೇ? ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ, ಮುಂದುವರಿಸುತ್ತೇವೆ ಎಂದು ಹೇಳಿದರು.
ಸಿಟಿ ರವಿ ಪೊಲೀಸ್ ವಶಕ್ಕೆ, ನಂತರ ಬಿಡುಗಡೆ
ಈ ಮಧ್ಯೆ, ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕ ಸಿಟಿ ರವಿ ಅವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ.