ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ನುಡಿಹಬ್ಬ (ಘಟಿಕೋತ್ಸವ) ಜನವರಿ 10ರಂದು ನಡೆಯಲಿದ್ದು, ನಾಡೋಜ ಗೌರವಕ್ಕೆ ಬಸವಲಿಂಗ ಪಟ್ಟದೇವರು, ತೇಜಸ್ವಿ ಕಟ್ಟಿಮನಿ ಮತ್ತು ಎಸ್.ಸಿ.ಶರ್ಮಾ ಪಾತ್ರರಾಗಲಿದ್ದಾರೆ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಅವರು ಪ್ರಕಟಿಸಿದರು
ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ದಾಖಲೆಯ 264 ವಿದ್ಯಾರ್ಥಿಗಳು ಪಿಎಚ್.ಡಿ ಪದವಿಯನ್ನು ಪಡೆಯಲಿದ್ದಾರೆ, ಕಳೆದ ವರ್ಷ 166 ಮಂದಿ ಪಿಎಚ್.ಡಿ ಪಡೆದುದು ಇದುವರೆಗಿನ ದಾಖಲೆಯಾಗಿತ್ತು ಎಂದರು.
ಜ.10ರಂದು ಸಂಜೆ 5 ಗಂಟೆಗೆ ಕುಲಾಧಿಪತಿ ಥಾವರ್ ಚಂದ್ ಗೆಹಲೋತ್ ಅವರು ಪದವಿ ಪ್ರಧಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಟಿ.ಲಿಟ್ ಹಾಗೂ ಪಿಎಚ್.ಡಿ ಪ್ರಧಾನ ಮಾಡಲಿದ್ದಾರೆ. ಆಂದ್ರಪ್ರದೇಶದ ಅನಂತಪುರ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ. ಕೋರಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
ವಿಶ್ವವಿದ್ಯಾಲಯ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ, ಈ ಬಜೆಟ್ ನಲ್ಲಿ ಸರ್ಕಾರ ಅಗತ್ಯದ ಅನುದಾನ ನೀಡುವ ವಿಶ್ವಾಸ ಇದೆ ಎಂದು ಕುಲಪತಿ ಹೇಳಿದರು.
ಕುಲಸಚಿವ ಡಾ.ವಿಜಯ ಪೂಣಚ್ಚ, ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.
ನಾಡೋಜ ಗೌರವಕ್ಕೆ ಪಾತ್ರರಾದವರ ವಿವರ
ನಾಡೋಜ ಗೌರವಕ್ಕೆ ಪಾತ್ರರಾದವರು ರಾಜ್ಯದ ಮೂರು ಭಾಗದಲ್ಲಿ ಮಹತ್ತರ ಸಾಧನೆ ಮಾಡಿದವರು. ಸಮಾಜಸೇವೆಯಲ್ಲಿ ವಿಶೇಷ ವಾಗಿ ಗುರುತಿಸಿಕೊಂಡಿರುವ ಕನ್ನಡ ಸ್ವಾಮಿಜೀ ಎಂದೇ ಖ್ಯಾತರಾದ ಭಾಲ್ಕಿ ವಿರಕ್ತಮಠದ ಬಸವಲಿಂಗ ಪಟ್ಟದೇವರು, ಆಂದ್ರಪ್ರದೇಶದ ಬುಡಕಟ್ಟು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ತೇಜಸ್ವಿ ಕಟ್ಟಿಮನಿ (ಧಾರವಾಡ) ಹಾಗೂ, ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ನ್ಯಾನೊ ಕ್ಷೇತ್ರದಲ್ಲಿ ಸಾಧನೆ ಮಾಡಿದ ‘ನ್ಯಾಕ್’ ನಿವೃತ್ತ ನಿರ್ದೇಶಕ ಪ್ರೊ.ಎಸ್.ಸಿ. ಶರ್ಮಾ (ಬೆಂಗಳೂರು) ಅವರು ನಾಡೋಜ ಗೌರವಕ್ಕೆ ಭಾಜನರಾಗಿದ್ದಾರೆ ಎಂದು ಕುಲಪತಿ ಮಾಹಿತಿ ನೀಡಿದರು.