ಶ್ರೀರಂಗಪಟ್ಟಣ : ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೋಮುದ್ವೇಷದ ಭಾಷಣ ಮಾಡಿದ ಆರೋಪ ಹೊತ್ತಿರುವ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಇಲ್ಲಿನ ೩ ನೇ ಅಪರ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ನಡೆಯಿತು. ದೂರುದಾರರಾದ ನಜ್ಮಾ ನಝೀರ್ ಚಿಕ್ಕನೇರಳೆ ಅವರ ಪರವಾಗಿ ಬೆಂಗಳೂರಿನ ಹಿರಿಯ ವಕೀಲ ಎಸ್. ಬಾಲನ್ ವಿಸ್ತೃತವಾಗಿ ವಾದ ಮಂಡಿಸಿದರು.
“ಸುಪ್ರಿಂ ಕೋರ್ಟ್ ಮತ್ತು ಹಲವು ಹೈಕೋರ್ಟ್ಗಳ ತೀರ್ಪುಗಳ ಪ್ರಕಾರ ಆರೋಪಿ ಕಲ್ಲಡ್ಕ ಪ್ರಭಾಕರ್ ಭಟ್ ನಿರೀಕ್ಷಣಾ ಜಾಮೀನಿಗೆ ಅನರ್ಹನಾಗಿದ್ದಾನೆ. ದೇಶದ ಭದ್ರತೆ, ಸೌಹಾರ್ದತೆಗೆ ಈ ಆರೋಪಿ ಕಂಟಕವಾಗಿದ್ದಾನೆ. ಈ ಹಿಂದಿನ ಐಪಿಸಿ ಮಾತ್ರವಲ್ಲ, ಈಗಿನ ನ್ಯಾಯ ಸಂಹಿತಾ ಮತ್ತು ಸಾಕ್ಷ್ಯ ಅಧಿನಿಯಮದ ಪ್ರಕಾರವೂ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನಿಗೆ ಅನರ್ಹನಾಗಿದ್ದಾನೆ” ಎಂದು ಕಾನೂನು, ಕಾಯ್ದೆಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು.
ಇದೇ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಪರ ವಕೀಲರು ಮತ್ತು ಸರ್ಕಾರಿ ವಕೀಲರು ಸಹ ವಾದ ಮಂಡಿಸಿದರು. ದೂರುದಾರರ ಪರವಾಗಿ ಹಿರಿಯ ವಕೀಲರಾದ ಎಸ್. ಬಾಲನ್ ಮತ್ತು ಲಕ್ಷ್ಮಣ ಚೀರನಹಳ್ಳಿ ಉಪಸ್ಥಿತರಿದ್ದರು. ನಿರೀಕ್ಷಣಾ ಜಾಮೀನಿನ ಅರ್ಜಿಯ ಬಗೆಗಿನ ವಾದ ಮುಕ್ತಾಯಗೊಂಡಿದ್ದು ಆದೇಶವನ್ನು ಜನವರಿ ೧೭ ಕ್ಕೆ ನ್ಯಾಯಾಲಯ ಕಾಯ್ದಿರಿಸಿದೆ.
ಪ್ರಭಾಕರ ವಿರುದ್ಧ ಯುಎಪಿಎ ದಾಖಲಿಸಿ: ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ದೇಶ ಒಡೆಯುವ ಸಂಘಟಿತ ಕೃತ್ಯ ಮಾಡಿದ್ದಾರೆ. ಆ ಕಾರಣಕ್ಕಾಗಿ ಆತನ ವಿರುದ್ದ ಹೆಚ್ಚುವರಿಯಾಗಿ ಕೋಕಾ ಕಾಯ್ದೆ, ಯುಎಪಿಎ ಮತ್ತು ಟೆರರಿಸ್ಟ್ ಕಾಯ್ದೆಗಳನ್ನು ಸೇರಿಸಬೇಕಿದೆ. ಆದ್ದರಿಂದ ಆರೋಪಿ ಪೊಲೀಸ್ ಕಸ್ಟಡಿಗೆ ಬೇಕಾಗಿದ್ದಾನೆ. ಕಲ್ಲಡ್ಕ ಪ್ರಭಾಕರ ಭಟ್ಟ ಹೇಳಿರುವ ಹೇಳಿಕೆಯನ್ನು ಆತನಿಂದ ದೃಢಪಡಿಸಿಕೊಂಡು, ಹೇಳಿಕೆಯ ಮಾದರಿ ಪಡೆದುಕೊಂಡು ಫಾರೆನ್ಸಿಕ್ ಲ್ಯಾಬ್ ಗೆ ಕಳಿಸಬೇಕಿದೆ. ಆರೋಪಿ ಮೇಲೆ ರೌಡಿ ಶೀಟ್ ತೆರೆಯಲು ಎಲ್ಲ ಆಧಾರಗಳಿದ್ದು, ಇವುಗಳ ಹಿನ್ನಲೆಯಲ್ಲಿ ಆರೋಪಿಯನ್ನು ತನಿಖೆಗೆ ಒಳಪಡಿಸಬೇಕಿದೆ. ಹಾಗಾಗಿ ಜಾಮೀನು ನಿರಾಕರಿಸಬೇಕು” ಎಂದು ವಕೀಲ ಬಾಲನ್ ವಾದ ಮಂಡಿಸಿದರು.