ಬಳ್ಳಾರಿ: ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಹೆಣ್ಣು ಭ್ರೂಣ ಹತ್ಯೆಯನ್ನು ಎಲ್ಲರೂ ಸೇರಿ ನಿರ್ಮೂಲನೆ ಮಾಡುವುದರ ಜೊತೆಗೆ ಲಿಂಗಾನುಪಾತದಲ್ಲಿ ಗಂಡು ಹೆಣ್ಣಿನ ಸಂಖ್ಯೆ ಸಮವಾಗಿರುವಂತೆ ಜಾಗೃತಿ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಯಾರಾದರೂ ಹೆಣ್ಣು ಭ್ರೂಣ ಪತ್ತೆ ಕುರಿತು ಮಾಹಿತಿ ನೀಡುತ್ತಿದ್ದರೆ ದಯವಿಟ್ಟು ಮಾಹಿತಿ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ ಬಾಬು ಅವರು ತಿಳಿಸಿದ್ದಾರೆ.
ಆಯುಷ್ಮಾನ್ ಭವಃ ಮೇಳವು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಜರುಗುತ್ತಿರುವ ಹಿನ್ನಲೆಯಲ್ಲಿ ಹೆಣ್ಣು ಭ್ರೂಣಲಿಂಗ ಕುರಿತು ಆಯುಷ್ಮಾನ್ ಭವಃ ಮೇಳಗಳಲ್ಲಿ ಜಾಗೃತಿ ನೀಡಲಾಗುತ್ತಿದೆ. ಭ್ರೂಣಲಿಂಗ ಕುರಿತು ಮಾಹಿತಿ ನೀಡುವ ವೈದ್ಯರು, ಮಾಹಿತಿ ಕೇಳುವ ಗರ್ಭಿಣಿಯ ಸಂಬಂಧಿಕರುಗಳಿಗೆ ಜೈಲುಶಿಕ್ಷೆ ಹಾಗೂ ದಂಡವನ್ನು ಪಿಸಿಪಿಎನ್ಡಿಟಿ ಕಾಯ್ದೆ-1994 ಅಡಿ ವಿಧಿಸಲಾಗುವುದು. ಈ ಕುರಿತು ಶಿಬಿರಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇಳಗಳಲ್ಲಿ ದೊರೆಯುವ ಇತರೆ ಸೇವೆಗಳು: ಮೇಳದಲ್ಲಿ ಅಸಾಂಕ್ರಾಮಿಕ ಖಾಯಿಲೆಯ ರೋಗಗಳಾದ ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನು ಪರೀಕ್ಷೆ ಮಾಡಿಸಿಕೊಳ್ಳಬಹುದು ಹಾಗೂ ಜೀವನ ಶೈಲಿ ಬದಲಿಸಿಕೊಳ್ಳಲು ಆಪ್ತಸಮಾಲೋಚನೆ ಮಾಡಲಾಗುವುದು.
ಆರೋಗ್ಯ ಕಾರ್ಡ್: ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಗುಣಮಟ್ಟದ ಆರೋಗ್ಯ ಸೇವೆಯೊಂದಿಗೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ 5 ಲಕ್ಷದವರೆಗೆ ಉಚಿತ ಶಸ್ತ್ರಚಿಕಿತ್ಸೆಯ ಸೌಲಭ್ಯವನ್ನು ಸುಸಜ್ಜಿತ ಆಸ್ಪತ್ರೆಗಳಲ್ಲಿ ಒದಗಿಸಲು ಆಯುಷ್ಮಾನ್ ಭವ- ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ- ಮುಖ್ಯಮಂತ್ರಿಯ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡುಗಳನ್ನು ಡಿಜಿಟಲ್ ಹೆಲ್ತ್ ನಂಬರ್ನೊಂದಿಗೆ ಸ್ಥಳದಲ್ಲಿಯೇ ಮೊಬೈಲ್ ಮೂಲಕ ಮಾಡಿಕೊಡಲಾಗುವುದು. ಜೊತೆಗೆ ಪ್ರತಿದಿನ ಮನೆ ಭೇಟಿ ಮೂಲಕ ಆರೋಗ್ಯ ಇಲಾಖೆಯ ಸಿಬ್ಬಂದಿ ಕಾರ್ಡ್ ಮಾಡಿಕೊಡುತ್ತಿದ್ದಾರೆ.
ಕ್ಷಯರೋಗ ಪರೀಕ್ಷೆ: ಎರಡು ವಾರಕ್ಕಿಂತ ಹೆಚ್ಚು ದಿನಗಳ ಕೆಮ್ಮು ಇದ್ದಲ್ಲಿ ಕ್ಷಯರೋಗ ಪರೀಕ್ಷೆ ಹಾಗೂ ರೋಗ ಲಕ್ಷಣಗಳುಳ್ಳವರ ಕಫ ಪರೀಕ್ಷೆಯನ್ನು ಕೈಗೊಳ್ಳಲಾಗುವುದು ಮತ್ತು ಇತರ ಸಾಮಾನ್ಯ ಆರೋಗ್ಯ ಸೇವೆಗಳನ್ನು ಸಹ ಕೈಗೊಳ್ಳಲಾಗುವುದು.
ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವಂತಹ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆ ಮತ್ತು ವಿಮ್ಸ್ ಗೆ ಕಳಿಸಿಕೊಡಲಾಗುವುದು. ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್, ಮೊಬೈಲ್ ಹಾಗೂ ಈ ಹಿಂದೆ ಅಸ್ಪತ್ರೆಗೆ ತೋರಿಸಿದ ಚೀಟಿಗಳನ್ನು ತಂದು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬಹುದು.