ಮೈಸೂರು: ಜ.೨೯ರಿಂದ ನಗರದ ಗಾನಭಾರತಿ ರಮಾಗೋವಿಂದ ಕಲಾ ವೇದಿಕೆಯಲ್ಲಿ ನಟರಾಜ ಫರ್ಫಾಮಿಂಗ್ ಆರ್ಟ್ಸ್ ಕೇಂದ್ರದ ವತಿಯಿಂದ ಮಂಜಿರ ಮಹೋತ್ಸವ ಎಂಬ ಮೂರು ದಿನಗಳ ರಾಷ್ಟ್ರೀಯ ಮಟ್ಟದ ಶಾಸ್ತ್ರೀಯ ನೃತ್ಯೋತ್ಸವ ಆಯೋಜಿಸಲಾಗಿದೆ ಎಂದು ಡಾ. ಕೃಪಾ ಫಡ್ಕೆ ತಿಳಿಸಿದರು. ಇಂದು ಜ.೨೯ರ ಸಂಜೆ ೫.೪೫ಕ್ಕೆ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಉದ್ಘಾಟಿಸುವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಇನ್ನಿತರರು ಅತಿಥಿಗಳಾಗಿರುವರು. ಸಂಸ್ಥೆಯ ಎಂ.ಕೆ. ಬಾಲರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಮಹೋತ್ಸವದಲ್ಲಿ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಡಿಸ್ಸಿ ನೃತ್ಯ ಕಲಾವಿದೆ ಸಿಂಧೂ ಕಿರಣ್ ಅವರನ್ನು ಗೌರವಿಸಲಾಗುವುದು.
ಮೊದಲ ದಿನ ಸಂಜೆ ಉದ್ಘಾಟನೆ ನಂತರ ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದೆ ಡಾ.ವಸುಂಧರ ದೊರೆಸ್ವಾಮಿ ಅವರು ವಿಶ್ವದ ೧೦ ದೇಶಗಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಪಡೆದಿರುವ ಕಾತ್ರ ದೌಪದಿ ಏಕವ್ಯಕ್ತಿ ನೃತ್ಯ ಪ್ರದರ್ಶನ ನಡೆಸಿಕೊಡಲಿದ್ದಾರೆ. ಸಂಜೆ ೭:೩೦ಕ್ಕೆ ವಿದುಷಿ ಸಿಂಧೂ ಕಿರಣ್ ಅವರಿಂದ ಓಡಿಸ್ಸಿ ನೃತ್ಯ ಪ್ರದರ್ಶನವಿರಲಿದೆ.
೩೦ರ ಸಂಜೆ ೬ ಗಂಟೆಗೆ ಕೇರಳದ ಕಲಾವಿದ ಶ್ರೀಕಾಂತ್ ಹಾಗೂ ಅವರ ಧರ್ಮಪತ್ನಿ ಅಶ್ವತಿ ಅವರಿಂದ ಭರತನಾಟ್ಯ ಪ್ರದರ್ಶನ, ೭.೩೦ಕ್ಕೆ ಬೆಂಗಳೂರಿನ ನಿರುಪಮಾ ರಾಜೇಂದ್ರ ಅವರ ಶಿಷ್ಯರಾದ ವಿದುಷಿ ಅದಿತಿ ಮತ್ತು ವಿದುಷಿ ಸ್ಫೂರ್ತಿ ಅವರಿಂದ ಕಥಕ್ ನೃತ್ಯ ಪ್ರದರ್ಶನವಿರಲಿದೆ.
ಕೊನೆಯ ದಿನವಾದ ಜ.೩೧ರ ಸಂಜೆ ೬ ಗಂಟೆಗೆ ಕರ್ನಾಟಕ ಕಲಾಶ್ರೀ ಸತ್ಯನಾರಾಯಣ ರಾಜು ಅವರಿಂದ ಏಕವ್ಯಕ್ತಿ ನೃತ್ಯ ಪ್ರದರ್ಶನ. ೭.೩೦ಕ್ಕೆ ಬೆಂಗಳೂರಿನ ಸೌಂದರ್ಯ ಶ್ರೀವತ್ಸ ಅವರ ಶಿಷ್ಯೆ ವಿದುಷಿ ರಜಿನಿ ಕಲ್ಲೂರ್ ಅವರಿಂದ ಭರತನಾಟ್ಯ ಪ್ರದರ್ಶನವಿರುತ್ತದೆ. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ತಿಳಿಸಿದರು.