ಯಳಂದೂರು: ಮಕ್ಕಳು ಇಂದು ಮೊಬೈಲ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಮೀಡಿಯಾಗಳ ದಾಸದಾರುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು ಮಕ್ಕಳನ್ನು ಪುಸ್ತಕ ಓದುವಂತೆ ಪ್ರೇರೇಪಿಸಬೇಕು ಎಂದು ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕ ಡಾ.ಭೀಮರಾಜು ಈರೇಗೌಡ ಕರೆ ನೀಡಿದರು.
ಅವರು ಪಟ್ಟಣದ ದೇವಾಂಗ ಬೀದಿಯಲ್ಲಿರುವ ಲಯನ್ಸ್ ವಿದ್ಯಾಸಂಸ್ಥೆಯ ೩೩ ನೇ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಾಗಬೇಕು. ಈಗ ಕಲಿಕೆಯ ವಿಧಾನಗಳು ಬದಲಾಗಿದೆ. ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಮಾಧ್ಯಮಗಳು ಮಕ್ಕಳ ಕಲಿಕೆಗೆ ಪೂರಕವಾಗಿರಬೇಕೆ ವಿನಹ ಇದರಿಂದ ಮಕ್ಕಳು ದಿಕ್ಕು ತಪ್ಪದಂತೆ ಎಚ್ಚರಿಕೆ ವಹಿಸಬೇಕು. ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಹೆಚ್ಚಿಸಬೇಕು.
ಗ್ರಾಮೀಣ ಭಾಗದಲ್ಲಿ ಲಯನ್ಸ್ ಸಂಸ್ಥೆಯ ಕಳೆದ ೩೩ ವರ್ಷಗಳಿಂದ ಒಂದು ಪ್ರತಿಷ್ಠಿತ ಶಾಲೆಯನ್ನು ನಡೆಸಿಕೊಂಡು ಬರುತ್ತಿರುವುದು ಸಂತಸದಾಯಕ ಸಂಗತಿಯಾಗಿದೆ. ಈ ಸಂಸ್ಥೆಯಲ್ಲಿ ಓದಿ, ಸಾಧನೆ ಮಾಡಿದವರು ಈಗಿರುವ ಮಕ್ಕಳಿಗೆ ಸ್ಪೂರ್ತಿಯಾಗಬೇಕು, ಇದನ್ನು ಪರಿಚಯಿಸುವ ಕೆಲಸವನ್ನು ಶಾಲೆಯ ಆಡಳಿತ ಮಂಡಲಿ, ಶಿಕ್ಷಕ ವರ್ಗ ಮಾಡಬೇಕು ಎಂದು ಆಶಿಸಿದರು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಪ್ರತಿಭೆಯನ್ನು ಓರೆಗೆ ಹಚ್ಚುವ ಕೆಲಸವನ್ನು ಶಿಕ್ಷಕರು ಹಾಗೂ ಪೋಷಕರು ಮಾಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಉತ್ತಮ ಸಾಧನೆಗೈದ ಪ್ರಾಥಮಿಕ, ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಲಯನ್ಸ್ ಕಾನ್ವೆಂಟ್ನ ಅಧ್ಯಕ್ಷ ಡಾ. ಎಸ್. ಕೃಷ್ಣಯ್ಯ, ಸಂಸ್ಥೆಯ ಪದಾಧಿಕಾರಿಗಳಾದ ಡಿ.ಜೆ. ರಾಜೇಶ್, ಎಚ್.ಜಿ. ಸಂತೋಷ್, ಬಸವರಾಜಪ್ಪ, ಮಹಾದೇವಸ್ವಾಮಿ, ಎಂ. ವೀರಭದ್ರಸ್ವಾಮಿ, ಉಮೇಶ್, ಮುಖ್ಯ ಶಿಕ್ಷಕ ಶಿವಕುಮಾರ್ ಸೇರಿದಂತೆ ಅನೇಕರು ಹಾಜರಿದ್ದರು.