ಮಂಡ್ಯ: ನಗರದ ವಿವಿ ರಸ್ತೆಯಲ್ಲಿರುವ ಐಐಎಫ್ ಎಲ್ ಫೈನಾನ್ಸ್ ಕಂಪನಿ ಸಿಬ್ಬಂದಿಗಳನ್ನು ಕೂಡಿ ಹಾಕಿ ರೈತರ ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು, ಮದ್ದೂರಿನ ಬಸವಲಿಂಗನದೊಡ್ಡಿ ಗ್ರಾಮದ ವೃದ್ಧ ರೈತ ದಾಸೇಗೌಡ ಎಂಬುವವರ ಮನೆಯನ್ನು ಕಂತಿನ ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ಕಂಪನಿ ಸೀಜ್ ಮಾಡಿತ್ತು. ಈ ಹಿನ್ನಲೆ ಫೈನಾನ್ಸ್ ಕಂಪನಿಯ ವ್ಯವಸ್ಥಾಪಕರ ವಿರುದ್ಧ ಗಂಭೀರ ಆರೋಪ ಮಾಡಿರುವ ರೈತರು ಆಕ್ರೋಶ ವ್ಯಕ್ತಡಿಸಿದ್ದಾರೆ.

ರೈತ ದಾಸೇಗೌಡ ಮನೆ ಮೇಲೆ 5 ಲಕ್ಷ ಸಾಲ ತೆಗೆದುಕೊಂಡಿದ್ದ. ಕಳೆದ ಎಂಟು ತಿಂಗಳಿಂದ ಕಂತಿನ ಹಣ ಪಾವತಿಸಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್ ಕಂಪನಿ ಮನೆ ಸೀಜ್ ಮಾಡಿತ್ತು. ಬ್ಯಾಂಕ್ ವ್ಯವಸ್ಥಾಪಕ ಕಾನೂನು ಅಸ್ತ್ರ ಪ್ರಯೋಗಿಸಿ ಕುಟುಂಬವನ್ನೇ ಮನೆಯಿಂದ ಹೊರಹಾಕಿ ಸೀಜ್ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದು, ಬಡ ವೃದ್ದ ಕುಟುಂಬ ಬೀದಿಯಲ್ಲಿಯೇ ಜೀವನ ಕಳೆಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯವಸ್ಥಾಪಕ ಸಮಸ್ಯೆ ಬಗೆಹರಿಸದೆ ಅನವಶ್ಯಕವಾಗಿ ಮಾತನಾಡಿದ್ದಾರೆ ಎಂದು ಆಪಾದಿಸಿರುವ ರೈತರು, ಕಂಪನಿಯ ಒಳಗೆ ಸಿಬ್ಬಂದಿಗಳನ್ನ ಕೂಡಿಹಾಕಿ ಬಾಗಿಲು ಮುಚ್ಚಿ ಪ್ರತಿಭಟಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಕಂತಿನ ಹಣ ಕಟ್ಟಿದ್ದಾರೆ. ಎಂಟು ತಿಂಗಳು ಉಳಿಸಿಕೊಂಡಿದ್ದಾರೆ, ಈ ರೀತಿ ಮಾಡಿ ಮನೆ ಸೀಜ್ ಮಾಡಿ ವೃದ್ಧ ಕುಟುಂಬವನ್ನು ಬೀದಿಗೆ ತಳ್ಳಿರುವುದು ಅಕ್ಷಮ್ಯ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆಯಲ್ಲಿ ರೈತ ಮುಖಂಡರು ಭಾಗಿಯಾಗಿದ್ದರು.
