ಪಿರಿಯಾಪಟ್ಟಣ: ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಸಹಕಾರ ಮತ್ತು ಪ್ರೋತ್ಸಾಹ ನೀಡಲು ಸಿದ್ಧರಿದ್ದೇವೆ ಎಂದು ಗ್ರಾ.ಪಂ ಅಧ್ಯಕ್ಷ ಹೆಚ್.ಎನ್ ಕಾಮರಾಜ್ ತಿಳಿಸಿದರು.
ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮ ಪಂಚಾಯತಿ ವತಿಯಿಂದ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಶಾಲೆಗಳಿಗೆ ಡ್ರಮ್ ಸೆಟ್, ಕ್ರೀಡೆ ಹಾಗೂ ಲೇಖನಿ ಸಾಮಾಗ್ರಿ ವಿತರಿಸಿ ಅವರು ಮಾತನಾಡಿದರು,
ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ, ಸರ್ಕಾರ ಹಾಗು ಸಂಘ ಸಂಸ್ಥೆಗಳು ನೀಡುವ ಪ್ರೋತ್ಸಾಹದಿಂದ ಶಾಲೆಗಳು ಅಭಿವೃದ್ಧಿಗೊಳ್ಳಲಿವೆ ಎಂದರು.
ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್ ಮಾತನಾಡಿ, ಶಿಕ್ಷಣವು ಮಕ್ಕಳ ಭವಿಷ್ಯ ರೂಪಿಸಲು ಅಡಿಗಲ್ಲು ಇದ್ದಂತೆ, ವ್ಯಕ್ತಿತ್ವದ ಸಮಗ್ರ ಅಭಿವೃದ್ಧಿಯ ಗುರಿಯನ್ನು ಹೊಂದಿರುವ ಶೈಕ್ಷಣಿಕ ವ್ಯವಸ್ಥೆಗೆ ಸಮಾಜದ ವಿವಿಧ ಸಂಘಸಂಸ್ಥೆಗಳು ಶಿಕ್ಷಣ ಇಲಾಖೆಯ ಜೊತೆಗೆ ಕೈಜೋಡಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಬೇಕು ಎಂದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ್ ಮಾತನಾಡಿ ಶಾಲೆಗಳು ಮತ್ತು ಸಮುದಾಯದ ಬಾಂಧವ್ಯವೃದ್ಧಿಗೆ ಗ್ರಾಮ ಪಂಚಾಯತಿ ಸಹಕಾರವಾಗುತ್ತದೆ ಎಂಬುದಕ್ಕೆ ಸ್ಥಳೀಯ ಗ್ರಾಮ ಪಂಚಾಯತಿ ಶಿಕ್ಷಣ ವ್ಯವಸ್ಥೆಗೆ ನೀಡಿರುವ ಸಹಕಾರ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಸಾಕಮ್ಮ, ಮಾಜಿ ಅಧ್ಯಕ್ಷೆ ಮೀನಾಕ್ಷಮ್ಮ, ಪಿಡಿಒ ನಾಗೇಂದ್ರ ಕುಮಾರ್, ಕಾರ್ಯದರ್ಶಿ ದಮಯಂತಿ, ಮುಖ್ಯಶಿಕ್ಷಕ ಸೋಮೇಶ್, ಶಿಕ್ಷಕರಾದ ರುದ್ರಪ್ಪ, ತಾಂಡವಮೂರ್ತಿ, ಮಂಗಳಾ, ಸುಧಾ, ಮಹಾದೇವಿ, ಮಮತಾ ಸೇರಿದಂತೆ ಮತ್ತಿತರಿದ್ದರು.