ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ನಗರದ ಜೆರೋಸಾ ಸ್ಕೂಲ್ ವಿವಾದಕ್ಕೆ ಸಂಬಂಧಿಸಿದಂತೆ ಮಕ್ಕಳನ್ನು ಉಪಯೋಗಿಸಿ ಪ್ರತಿಭಟನೆ ಮಾಡಿದ್ದ ಬಿಜೆಪಿ ಶಾಸಕರು, ಹಿಂದೂ ಸಂಘಟನೆಯ ಪ್ರಮುಖರ ಮೇಲೆ ಎಫ್ ಐ ಆರ್ ದಾಖಲು ಮಾಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಮಂಗಳೂರು ನಗರದಲ್ಲಿ ಪ್ರತಿಭಟನೆ ನಡೆಸಿದ ವೇಳೆ ರಸ್ತೆ ತಡೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ.

ಕೂಡಲೇ ಜಾಗೃತರಾದ ಪೊಲೀಸರು ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಜೆರೋಸಾ ಶಾಲೆಯ ಘಟನೆ ಹಿನ್ನೆಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್, ಡಾ, ಭರತ್ ಶೆ್ಟ್ಟಿ, ವಿಹೆಚ್ಪಿ ಮುಖಂಡ ಶರಣ್ ಪಂಪ್ವೆಲ್, ಪಾಲಿಕೆಯ ಸದಸ್ಯರುಗಳ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಜಿಲ್ಲಾಡಳಿತ ಮತ್ತು ಮಂಗಳೂರು ಪೊಲೀಸರ ಕ್ರಮ ಖಂಡಿಸಿ ಇಂದು ನಗರದಲ್ಲಿ ವಿಹೆಚ್ಪಿ ಹರತಾಳಕ್ಕೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕ್ಲಾಕ್ ಟವರ್ ಬಳಿ ನೂರಾರು ಬಜರಂಗದಳ ಮತ್ತು ವಿಹೆಚ್ಪಿ ಕಾರ್ಯಕರ್ತರು ಸೇರಿದ್ದರು .
ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಿದ್ದರು. ಆದ್ರೆ ಕಾರ್ಯಕರ್ತರು ದಿಡೀರ್ ರಸ್ತೆ ತಡೆಗೆ ಮುಂದಾದರು, ಇದಕ್ಕೆ ಪೊಲೀಸರು ಅವಕಾಶ ನೀಡದ ಕಾರಣ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಜಟಾಪಟಿ ನಡೆಯಿತು. ಜೈ ಶ್ರೀ ರಾಂ ಘೋಷಣೆಯೊಂದಿಗೆ ಕಾರ್ಯಕರ್ತರು ಮುನ್ನಗ್ಗಲು ಯತ್ನಿಸಿದಾಗ ಕೂಡಲೇ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.