ಚಾಮರಾಜನಗರ: ಶಿವಾಜಿಯ ನಾಯಕತ್ವ , ಸ್ವರಾಜ್ಯದ ಶ್ರೇಷ್ಠ ಚಿಂತನೆಯ ಹುಟ್ಟು ನಾಯಕತ್ವದ ಗುಣಗಳನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ರಾಷ್ಟ್ರ ನಿರ್ಮಾಣಕ್ಕೆ ಶಿವಾಜಿಯ ಆಡಳಿತದ ಸೂತ್ರಗಳು ಹಾಗೂ ನಾಯಕತ್ವದ ಸೂತ್ರಗಳು ಬಹಳ ಪ್ರೇರಕವಾದದ್ದು ಎಂದು ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂಥ್ ಕ್ಲಬ್ ನಗರದ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಶಿವಾಜಿಯಂತಹ ಶ್ರೇಷ್ಠ ವ್ಯಕ್ತಿ ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ.
ಅವರ ಸಾಮ್ರಾಜ್ಯ ನಿರ್ಮಾಣ ,ರಾಷ್ಟ್ರೀಯ ಪರಿಕಲ್ಪನೆ ಹಿಂದೂ ಸಾಮ್ರಾಜ್ಯದ ಚಿಂತನೆ, ಎಲ್ಲ ಧರ್ಮಗಳ ಜನರನ್ನ ಗೌರವಿಸುವ ಬಹುದೊಡ್ಡ ಗುಣವನ್ನು ಹೊಂದಿದ್ದ ಶಿವಾಜಿ ಗೋ ಸಂಪತ್ತು ,ನಾಡ ಸಂಪತ್ತು, ಸ್ತ್ರೀ ಗೌರವ, ಶಕ್ತಿ ಹಾಗೂ ಗೌರವಕ್ಕೆ ಹಾಗೂ ಕಂದಾಯ ವ್ಯವಸ್ಥೆಗೆ ,ಸೈನ್ಯದ ಚಿಂತನೆ ಹಾಗೂ ನೌಕಾಪಡೆಯ ಶ್ರೇಷ್ಠವಾದ ಪರಿಕಲ್ಪನೆಯ ಮೂಲಕ ಆಡಳಿತವನ್ನು ನಡೆಸಿದ ಮಹಾನ್ ನಾಯಕರು.
ಉತ್ತರ ಭಾರತದ ಮೊಗಲರು ಹಾಗೂ ದಕ್ಷಿಣದ ಬಿಜಾಪುರ ,ಗೋಲ್ಕೊಂಡ ,ಅಹಮದ್ ನಗರ ಮುಂತಾದ ಅನೇಕ ರಾಜರುಗಳನ್ನ ಸೋಲಿಸುವ ಮೂಲಕ ಇಡೀ ಭಾರತದಲ್ಲಿ ಯುದ್ಧ ಕೌಶಲ್ಯ ಹಾಗೂ ಬುದ್ಧಿವಂತಿಕೆಗೆ ಹೆಸರಾದ ಶಿವಾಜಿಯ ಆಡಳಿತ ಸೂತ್ರಗಳು ಇಂದಿಗೂ ಎಲ್ಲ ದೇಶಗಳಿಗೂ ಪ್ರೇರಣೆಯಾಗಿದೆ. ರಾಷ್ಟ್ರ ನಿರ್ಮಾಣ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಶಿವಾಜಿಯ ಚಿಂತನೆಗಳು ಮಹತ್ವದ ಪರಿಣಾಮವನ್ನು ಬೀರುತ್ತಿದೆ ಎಂದು ತಿಳಿಸಿದರು.ವಿಶ್ವದ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಶಿವಾಜಿಯ ಇತಿಹಾಸ ಅಧ್ಯಯನವನ್ನು ಆಡಳಿತಗಾರರು ವಿಶೇಷವಾಗಿ ತಿಳಿಯಬೇಕು ಎಂದು ಋಗ್ವೇದಿ ತಿಳಿಸಿದರು.
ಶಿವಾಜಿಯ ಭಾವಚಿತ್ರಕ್ಕೆ ಹಾಗೂ ಶಿವಾಜಿಯ ಪುಸ್ತಕಗಳಿಗೆ ಪುಷ್ಪವನ್ನು ಸಲ್ಲಿಸುವ ಮೂಲಕ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿಕೆ ಆರಾಧ್ಯ ಉದ್ಘಾಟಿಸಿದರು. ಶಿವಾಜಿ ಆಧ್ಯಾತ್ಮದ ಗುಣ ವಿಶೇಷಗಳನ್ನು ಗುರುಗಳು ಹಾಗೂ ತಾಯಿ ಜೀಜಾಬಾಯಿ ರವರಿಂದ ಅರಿತು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಶಿವಾಜಿ ಮಹಾನ್ ನಾಯಕರಾಗಲು ಅವರ ದೈವ ಭಕ್ತಿ ಹಾಗೂ ಪ್ರಜೆಗಳ ಬಗ್ಗೆ ಗೌರವ ಹಾಗೂ ಸಾಮರ್ಥ್ಯಗಳೆ ಕಾರಣವೆಂದು ತಿಳಿಸಿದರು. ಜೈ ಹಿಂದ್ ಪ್ರತಿಷ್ಠಾನದ ರವಿ ಮಾಲಾ,ನಾಗರಿಕರಾದ ಮಹದೇವು, ನಂಜುಂಡಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
