ಮೈಸೂರು: ಕೇಂದ್ರ ಸರ್ಕಾರ ಕರ್ನಾಟಕದ ಬಡ ಜನತೆಗೆ ನೀಡಬೇಕಾಗಿರುವ ಅನ್ನವನ್ನು ಕಸಿಯಲು ಹಾಗೂ ಅಕ್ಕಿ ಕದನ ಆರಂಭಿಸಿರುವ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದ್ದೆ ಎಂದು ಆರೋಪಿಸಿ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನಾ ಧರಣಿ ನಡೆಯಿತು.
ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದರು. ರಾಜ್ಯದ ಪಾಲು ನೀಡುವಂತೆ ಆಗ್ರಹಿಸಿದರು. ದ್ವೇಷದ ರಾಜಕಾರಣ ನಿಲ್ಲಿಸುವಂತೆ ಒತ್ತಾಯಿಸಿದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ೧೦ ಕೆಜಿ ವಿತರಿಸುವ ಗ್ಯಾರಂಟಿ ಯೋಜನೆ ಪ್ರಕಟಿಸಿದ ಮರು ದಿನವೇ ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳ ಹೊರತುಪಡಿಸಿ ಅಕ್ಕಿ, ಗೋದಿ ಸರಬರಾಜು ಮಾಡಲಾಗುತ್ತಿಲ್ಲ ಎಂದು ಆದೇಶ ಹೊರಡಿಸಿದೆ. ಇದು ದ್ವೇಷದ ರಾಜ್ಯದ ಮೇಲಿನ ದ್ವೇಷ ರಾಜಕಾರಣಕ್ಕೆ ನಿದರ್ಶನ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ತೊಂದರೆ ಕೊಡುತ್ತಿದೆ. ಆದರೆ, ಗ್ಯಾರಂಟಿ ಅನುಷ್ಠಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅಕ್ಕಿ ಸಹಿತವಾಗಿ ಎಲ್ಲ ಗ್ಯಾರಂಟಿಗಳನ್ನು ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಕರ್ನಾಟಕ ಮತ್ತು ಕನ್ನಡಿಗರ ಮೇಲಿನ ಕೇಂದ್ರ ಸರ್ಕಾರದ ದ್ವೇಷ ರಾಜಕಾರಣವನ್ನು ಖಂಡಿಸುತ್ತೇನೆ ಎಂದು ನುಡಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ೫ ಗ್ಯಾರಂಟಿಗಳ ಬಗ್ಗೆ ಜನ ಸಾಮಾನ್ಯರ ಬಗ್ಗೆ ಅಭಿಪ್ರಾಯ ಆಲಿಸಬೇಕು. ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಸಂಭ್ರಮವನ್ನು ನೋಡಬೇಕು. ಈ ಪ್ರತಿಕ್ರಿಯೆಯನ್ನು ಬಿಜೆಪಿ ನಾಯಕರು ತಡೆದುಕೊಳ್ಳಲು ಆಗದೇ ಮೈ ಮೇಲೆ ಚೇಳು ಬಿಟ್ಟುಕೊಟ್ಟವರಂತೆ ಒದ್ದಾಡುತ್ತಿದ್ದಾರೆ ಎಂದು ಕುಟುಕಿದರು.
ಇವತ್ತು ನಮ್ಮ ಕಾರ್ಯಕರ್ತರ ಪರಿಶ್ರಮದಿಂದ ೧೩೬ ಶಾಸಕರು ಗೆಲುವು ಪಡೆದಿದ್ದರೆ. ನಮ್ಮ ಗ್ಯಾರಂಟಿಗಳಿಂದ ಮುಂದಿನ ೧೦ ವರ್ಷ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಖಾತ್ರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ೧೦ಕ್ಕೆ ಕುಸಿದಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ಕುಮಾರ್ ಮಾತನಾಡಿ, ಉಚಿತ ಬಸ್ ಪ್ರಯಾಣ, ಗೃಹ ಜ್ಯೋತಿ, ಯುವನಿಧಿ ಯೋಜನೆಗಳ ಕುರಿತಂತೆ ಆರ್ಎಸ್ಎಸ್, ಒಂದು ಜಾತಿ ಜನರಲ್ಲಿ ಕೆಟ್ಟ ಅಭಿಪ್ರಾಯವನ್ನು ರೂಪಿಸಲು ನಿರತವಾಗಿದೆ. ಕಾಂಗ್ರೆಸ್ ಮುಖಂಡರು ತಮ್ಮ ಸರ್ಕಾರಕ್ಕೆ ನೈತಿಕ ಬೆಂಬಲ ಕೊಡದಿದ್ದರೆ ಕೆಟ್ಟ ಹೆಸರು ಬರಲಿದೆ ಎಂದರು.
ಸಿದ್ದರಾಮಯ್ಯ ಅವರದು ಕತ್ತಿಯ ಮೇಲಿನ ನಡಿಗೆಯಾಗಿದೆ. ಪ್ರತಿಪಕ್ಷದವರ ಬಾಯಿ ಮುಚ್ಚಿಸುವುದು, ಹಣ ಕ್ರೋಢೀಕರಣದಿಂದ ಸಿಎಂ, ಡಿಸಿಎಂ ನಿರಂತರ ಸಭೆ ಮಾಡುತ್ತಿದ್ದಾರೆ. ರಾತ್ರಿ ಮಲಗಲಾಗುತ್ತಿಲ್ಲ. ಅಷ್ಟು ಹಿಂಸೆ ಕೊಡುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ, ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಮಾಜಿ ಮೇಯರ್ಗಳಾದ ಪುರುಷೋತ್ತಮ್, ಟಿ.ಬಿ.ಚಿಕ್ಕಣ್ಣ, ಪುಷ್ಪಾಲತಾ ಚಿಕ್ಕಣ್ಣ, ನಾರಾಯಣ, ರಾಜೇಶ್ವರಿ, ಮೋದಾಮಣಿ, ಮುಖಂಡರಾದ ಬಿ.ಎಂ.ರಾಮು, ಮಂಜುಳಾ ಮಾನಸ, ಈಶ್ವರ್ ಚಕ್ಕಡಿ, ಗಿರೀಶ್, ಡೈರಿ ವೆಂಕಟೇಶ್, ಮುಡಾಮಾಜಿ ಅಧ್ಯP ಬಸವೇಗೌಡ, ಎಂ. ನಾರಾಯಣ, ಮಾಜಿ ಮೇಯರ್ ಪುರುಷೋತ್ತಮ, ಟಿ.ಬಿ.ಚಿಕ್ಕಣ್ಣ, ಪುಷ್ಪಾಲತಾ ಚಿಕ್ಕಣ್ಣ, ಪುಷ್ಪಾವಲ್ಲಿ, ಲತಾ ಸಿದ್ದಶೆಟ್ಟಿ, ಲತಾ ಮೋಹನ್, ಬಿ.ಕೆ.ಪ್ರಕಾಶ್, ಸುನಂದಾ ಕುಮಾರ್, ಎನ್.ಎಸ್.ಗೋಪಿನಾಥ್, ಡಿ.ನಾಗಭೂಷಣ, ಶಿವಮಲ್ಲು, ಭಾಸ್ಕರ್ ಎನ್.ಗೌಡ, ಗಿರೀಶ್ ನಾಯಕ, ವರುಣಾ ಮಹೇಶ್, ಕೃಷ್ಣಕುಮಾರ್ ಸಾಗರ್, ತಲಕಾಡು ಮಂಜುನಾಥ್, ಸಿದ್ದರಾಮೇಗೌಡ, ಸಿದ್ದರಾಜು, ಎಂ.ಶಿವಣ್ಣ, ಎಂ.ಎಸ್.ರಾಜಶೇಖರಮೂರ್ತಿ ಮುಂತಾದವರು ಭಾಗವಹಿಸಿದ್ದರು.
೫ ಗ್ಯಾರಂಟಿಗಳ ಕುರಿತು ಜನ ಸಾಮಾನ್ಯರ ಅಭಿಪ್ರಾಯ ಆಲಿಸಬೇಕು. ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಸಂಭ್ರಮವನ್ನು ನೋಡಬೇಕು. ಈ ಪ್ರತಿಕ್ರಿಯೆಯನ್ನು ಬಿಜೆಪಿ ನಾಯಕರು ತಡೆದುಕೊಳ್ಳಲು ಆಗದೇ ಮೈ ಮೇಲೆ ಚೇಳು ಬಿಟ್ಟುಕೊಟ್ಟವರಂತೆ ಒದ್ದಾಡುತ್ತಿದ್ದಾರೆ.
-ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ