ಬಳ್ಳಾರಿ: ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವಂತಹ ಎಲ್ಲಾ ರೀತಿಯ ಸೇವೆಗಳನ್ನು ಆನ್ಲೈನ್ನಲ್ಲಿ ಪಡೆಯಬಹುದು. ಗ್ರಾಮ ಪಂಚಾಯಿತಿ ಸೇವೆಗಳಿಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿ ಪರಿಶೀಲನೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಎಲ್ಲಾ ಕುಂದುಕೊರತೆಗಳನ್ನು ದಾಖಲಿಸಿ ಮೊಬೈಲ್ನಲ್ಲಿ ವಾಟ್ಸಾಪ್ ಚಾಟ್ ಮೂಲಕ ಪರಿಹಾರವನ್ನು ಪಡೆಯಬಹುದು ಎಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಹೇಳಿದರು.
ಬಳ್ಳಾರಿ ತಾಲ್ಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಇಂದು ಏರ್ಪಡಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಿದ್ಧಪಡಿಸಿರುವ ಮಹತ್ವದ ‘ಪಂಚಮಿತ್ರ’ ವಾಟ್ಸಾಪ್ ಚಾಟ್ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಮೊಬೈಲ್ನಲ್ಲಿ ನಂಬರ್ ಅನ್ನು ಸೇವ್ ಮಾಡಿಕೊಂಡು ಚಾಟ್ ಅನ್ನು ಆರಂಭಿಸಿದರೆ ಭಾಷೆಯ ಆಯ್ಕೆ, ಹೆಸರು, ವಿಳಾಸ, ಮೊಬೈಲ್ ನಂಬರ್ ಎಲ್ಲಾ ಮಾಹಿತಿ ನೀಡಿ ಲಾಗಿನ್ ಆಗಬೇಕು. ನಂತರ ಆಯ್ಕೆಗಳು ಆರಂಭವಾಗುತ್ತವೆ. ಕ್ರಮ ಸಂಖ್ಯೆಯನ್ನು ನಮೂದಿಸುವ ಮೂಲಕ ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆಯನ್ನು ಮಾಡಿಕೊಂಡು ನಂತರ ಗ್ರಾಮ ಪಂಚಾಯಿತಿಯ ಆಯ್ಕೆ ಮಾಡಿಯನ್ನು ಚುನಾಯಿತ ಪ್ರತಿನಿಧಿಗಳು ಸಿಬ್ಬಂದಿಯ ಮಾಹಿತಿ ಪಡೆಯಬಹುದು ಎಂದರು.
ಸಾರ್ವಜನಿಕರು ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಕಟ್ಟಡ ನಿರ್ಮಾಣದ ಲೈಸೆನ್ಸ್, ನೀರು ಸರಬರಾಜು ಸಂಪರ್ಕ, ವ್ಯಾಪಾರ ಪರವಾನಿಗೆ ಸೇರಿದಂತೆ ಎಲ್ಲಾ ಇತರ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿಗಳ ಸ್ಥಿತಿಗತಿಗಳನ್ನು ಪರಿಶೀಲಿಸಬಹುದು ಎಂದು ತಿಳಿಸಿದರು. ನರೇಗಾ ಯೋಜನೆ, ತ್ಯಾಜ್ಯ ನಿರ್ವಹಣೆ, ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಿಸಿದ 78 ವರ್ಗಗಳ ಕುಂದು ಕೊರತೆಗಳನ್ನು ದಾಖಲಿಸಿ ಪರಿಹಾರವನ್ನು ಪಡೆದುಕೊಳ್ಳಬಹುದು. ಇದರ ಜೊತೆಗೆ ಸ್ವಾಧೀನ ಪ್ರಮಾಣ ಪತ್ರ, ರಸ್ತೆ ಅಗೆಯಲು ಅನುಮತಿ, ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಪರವಾನಿಗೆ, ನಿರಾಕ್ಷೇಪಣಾ ಪತ್ರ, ಜಾಬ್ ಕಾರ್ಡ್ ವಿತರಣೆ ಇನ್ನು ಹಲವು ಸೇವೆಗೆ ಅರ್ಜಿ ಸಲ್ಲಿಸಬಹುದು ಎಂದರು.
ವಾಟ್ಸ್ಆಪ್ ಚಾಟ್ಗೆ ಸಂಪರ್ಕ ಸಂಖ್ಯೆ 8277506000: ಈ ಪಂಚಮಿತ್ರ ಡಿಜಿಟಲ್ ಸೇವೆ ಪಡೆಯಲು ಅಗತ್ಯವಿದೆ. ಈ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡು ಸಾರ್ವಜನಿಕರು ಚಾಟ್ ಮಾಡಬಹುದು. ಮೊದಲಿಗೆ ಹಾಯ್ ಎಂಬ ಸಂದೇಶ ಕಳುಹಿಸಬೇಕು. ಆಗ ಪರದೆ ಮೇಲೆ ಭಾಷೆ ಆಯ್ಕೆ ಅವಕಾಶ ಸಿಗಲಿದೆ. ಬಳಿಕ ಜಿಲ್ಲೆ, ತಾಲೂಕು ಹಾಗೂ ನಿರ್ದಿಷ್ಟ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಳ್ಳ ಬೇಕು. ನಂತರ ಸೇವೆ, ಮಾಹಿತಿ, ಕುಂದುಕೊರತೆ ಎಂಬ ಮೂರು ಆಯ್ಕೆ ಮೂಡಲಿದ್ದು, ಅಗತ್ಯ ಸೇವೆಯನ್ನು ಪಡೆಯಬಹುದು.