Wednesday, April 23, 2025
Google search engine

Homeರಾಜಕೀಯನಂಬಿಸಿ ಕೈಬಿಟ್ಟ ಯಡಿಯೂರಪ್ಪ ಮೇಲೆ  ಬೇಸರವಿದೆ: ಜೆಸಿ ಮಾಧುಸ್ವಾಮಿ ಕಿಡಿ

ನಂಬಿಸಿ ಕೈಬಿಟ್ಟ ಯಡಿಯೂರಪ್ಪ ಮೇಲೆ  ಬೇಸರವಿದೆ: ಜೆಸಿ ಮಾಧುಸ್ವಾಮಿ ಕಿಡಿ

ಬೆಂಗಳೂರು: ಮನೆಯಲ್ಲಿ ಕುಳಿತಿದ್ದವರನ್ನ ಚುನಾವಣೆಗೆ ರೆಡಿ ಆಗಿ ಎಂದರು. ಈಗ ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ. ನಂಬಿಸಿ ಕೈಬಿಟ್ಟ ಯಡಿಯೂರಪ್ಪ ಮೇಲೆ  ನಮಗೆ ಬೇಸರವಿದೆ ಎಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಕೆಂಡಾಮಂಡಲರಾಗಿದ್ದಾರೆ.

ತುಮಕೂರು ಟಿಕೆಟ್​ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಮಾಧುಸ್ವಾಮಿ ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರಿಗೆ ಬೇಕಾದ ಎರಡು–ಮೂರು ಕ್ಷೇತ್ರಗಳನ್ನು ಹಠ ಮಾಡಿ ತೆಗೆದುಕೊಂಡಿದ್ದಾರೆ. ನನಗೆ ಯಾಕೆ ಟಿಕೆಟ್‌ ಕೊಡಿಸಲಿಲ್ಲ. ಸೋಮಣ್ಣ ರಾಜ್ಯಸಭೆ ಟಿಕೆಟ್‌ ಗಾಗಿ ನವದೆಹಲಿ ತನಕ ಹೋಗಿ ಬಂದರು. ಅಲ್ಲಿ ಟಿಕೆಟ್ ಕೈ ತಪ್ಪಿದರೆ ಇಲ್ಲಿ ಕೊಡಬಹುದಾ? ಅವರೇನು ಈ ಕ್ಷೇತ್ರದ ಸಂಬಂಧಿಕರಾ, ನೆಂಟರಾ?  ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವರು ನಾನು ದೆಹಲಿಗೆ ಹೋಗುವುದನ್ನು ತಡೆದಿದ್ದರು. ನಿನಗೆ ಬಿ.ಫಾರ್ಮ್‌ ತಂದು ಕೊಡುವ ಜವಾಬ್ದಾರಿ ನನ್ನದು ಎಂದು ಹೇಳಿದ್ದರು. ಸೋಮಣ್ಣನ ನಾಲಿಗೆಗೆ, ಬೈಗುಳಕ್ಕೆ ಯಡಿಯೂರಪ್ಪ ಹೆದರಿಕೊಂಡು ನನ್ನ ಬಲಿ ಮಾಡಿದರು. ಆ ನೋವು ನನಗಿದೆ. ಅಪ್ಪ ಮಕ್ಕಳಿಗೆ ಸ್ವಹಿತಾಸಕ್ತಿಯೇ ಹೆಚ್ಚಾಗಿರಬಹುದು ಎಂದು ಕಿಡಿಕಾರಿದರು.

ಸೋಮಣ್ಣ ಅವರನ್ನು ಮನೆಗೆ ಬರಬೇಡಿ ಎಂದು ಹೇಳುವಷ್ಟು ಕೆಟ್ಟ ಮನುಷ್ಯ ನಾನಲ್ಲ. ನನ್ನ ಮನಸ್ಥಿತಿ ಸರಿಯಾಗಿಲ್ಲ. ಇಂತಹ ಸಮಯದಲ್ಲಿ ಬರುವುದು ಬೇಡ ಎಂದು ಹೇಳಿದೆ. ನಾನು ಯಾವುದೇ ಮಾತುಕತೆಗೆ ಸಿದ್ಧನಿಲ್ಲ. ಅವರು ಬರುತ್ತಾರೆ ಅಂತ ನಡೆಮುಡಿ ಹಾಸಿಕೊಂಡು ಕುಳಿತುಕೊಳ್ಳಲು ಆಗುತ್ತಾ? ಎಂದು ಪ್ರಶ್ನಿಸಿದರು.

ಸೋಮಣ್ಣ ಪರವಾಗಿ ನಾವು ಪ್ರಚಾರ ಮಾಡುವುದಿಲ್ಲ. ಹೊರಗಿನಿಂದ ಬಂದವರಿಗೆ ಬೆಂಬಲ ನೀಡುವುದಿಲ್ಲ. ಕಾರ್ಯಕರ್ತರು ತಟಸ್ಥವಾಗಿ ಇರೋಣ ಎಂದರೆ ತಟಸ್ಥವಾಗಿ ಇರುತ್ತೇನೆ. ಚುನಾವಣೆ ದಿನಾಂಕ ಘೋಷಣೆಯಾದ ನಂತರ ಕಾರ್ಯಕರ್ತರ ಸಭೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆಂದು ಹೇಳಿದರು.

RELATED ARTICLES
- Advertisment -
Google search engine

Most Popular