ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ತಾಲೂಕಿನ ಇತಿಹಾಸ ಪ್ರಸಿದ್ದ ಹಂಪಾಪುರಗ್ರಾಮದ ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಬ್ರಹ್ಮರಥೋತ್ಸವ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ಹೃದಯಭಾಗದಲ್ಲಿರುವ ದೇವಾಲಯದ ಆವರಣದಲ್ಲಿ ನಡೆದ ರಥೋತ್ಸವದಲ್ಲಿ ಜಿಲ್ಲೆ, ರಾಜ್ಯದ ವಿವಿದೆಡೆಗಳಿಂದ ಆಗಮಿಸಿದ ಸಾವಿರಾರು ಭಕ್ತಾಧಿಗಳು ಅಮ್ಮನವರನ್ನು ಪ್ರತಿಷ್ಠಾಪಿಸಿದ್ದ ರಥವನ್ನು ದೇವಾಲಯದ ಸುತ್ತಾ ಎಳೆದು ತಂದು ನಿಲ್ಲಿಸುವ ಮೂಲಕ ಕೃತಾರ್ಥರಾದರು. ಮಧ್ಯಾಹ್ನ ೧೨-೦೦ರಿಂದ೧೨-೩೦ಕ್ಕೆ ನಡೆದ ರಥೋತ್ಸವದಲ್ಲಿ ಮೊದಲಿಗೆ ಅಮ್ಮನವರಿಗೆ ಪೂಜೆ ಸಲ್ಲಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಪೂಜೆ ಸಲ್ಲಿಸಿ ರಥವನ್ನು ಎಳೆಯಲಾರಂಬಿಸಿದ ಭಕ್ತಾಧಿಗಳು ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ ಜಯಘೋಷ ಮೊಳಗಿಸುತ್ತಾ ನಾಡಿನಲ್ಲಿ ಸುಖ, ಶಾಂತಿ, ಸಮೃದ್ದ ಮಳೆಯಾಗಿ ಎಲ್ಲೆಡೆ ಉತ್ತಮ ಬೆಳೆಯಾಗಿ ಜನತೆ ಸುಖ ಸಂತೋಷದಿಂದ ಇರಲಿ ಎಂದು ಪ್ರಾರ್ಥಿಸಿದರು.
ಬಿರು ಬಿಸಿಲಿನ ನಡುವೆಯೂ ಲೆಕ್ಕಿಸದೆ ರಥೋತ್ಸವದಲ್ಲಿ ಪಾಲ್ಗೊಂಡ ನವಜೋಡಿ, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ರಥದ ಮೇಲೆ ಹಣ್ಣುಧವನ ಎಸೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿದರು. ರಥೋತ್ಸವ ಮತ್ತು ಜಾತ್ರಾಮಹೋತ್ಸವದ ಪ್ರಯುಕ್ತ ಗ್ರಾಮದ ವಿವಿಧ ಸಂಘಟನೆಗಳ ವತಿಯಿಂದ ಪಾನಕ, ಮಜ್ಜಿಗೆ ತಂಪುಪಾನೀಯ ಹಾಗೂ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಈ ಸಂಧರ್ಭದಲ್ಲಿ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮಿಗೌಡ, ಹಂಪಾಪುರ ಪಿಎಸಿಸಿ ಅಧ್ಯಕ್ಷ ಹೆಚ್.ಪಿ.ಪ್ರಶಾಂತ್, ಗ್ರಾಮಪಂಚಾಯಿತಿ ಸದಸ್ಯ ಹಂಪಾಪುರಹರಿರಾಜು, ರಾಮೇಗೌಡ, ಮುಖಂಡರಾದ ರಾಮಸ್ವಾಮಿಗೌಡ, ಹನುಮಂತೇಗೌಡ, ಮೀನ್ನಾಗರಾಜ್, ಗುರುಪ್ರಸಾದ್, ಲೋಕೇಶ್, ಧನು, ನಾರಾಯಣ, ರೈತಮುಖಂಡ ಮಂಚನಹಳ್ಳಿಗಿರೀಶ್, ರೇವಣ್ಣ, ಮಂಜುನಾಥ್, ಸನ್ಯಾಸಿಪುರಬಸವರಾಜು, ಶಿವಣ್ಣ ಇನ್ನಿತರ ಮುಖಂಡರು ಹಾಗೂ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.