ಕಲಬುರಗಿ: ನಾನು ಬ್ರಹ್ಮ ಬಂದರೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂಬ ಈಶ್ವರಪ್ಪನವರ ಹೇಳಿಕೆಗೆ ವ್ಯಂಗ್ಯವಾಡಿದ ಅಶೋಕ್, ಈ ಶತಮಾನಕ್ಕಂತೂ ಭೂಲೋಕಕ್ಕೆ ಬ್ರಹ್ಮ ಬರುವುದಿಲ್ಲ ಎಂದು ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಬ್ರಹ್ಮ ಭೂಲೋಕಕ್ಕೆ ಬರುವ ಸಾಧ್ಯತೆಯೇ ಇಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಈಶ್ವರಪ್ಪನವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರನ್ನು ನಮ್ಮ ಹಿರಿಯರೇ ಅವರ ಮನವೊಲಿಸುವ ಕೆಲಸ ಮಾಡುತ್ತಾರೆ. ಶಿವಮೊಗ್ಗದಲ್ಲಿ ಪರಿಸ್ಥಿತಿ ತಿಳಿಯಾಗಲಿದೆ. ಯಾವುದೇ ಕಾರಣಕ್ಕೂ ಅವರು ಕಣದಲ್ಲಿ ಇರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರ ಮನೆ ಹಾಳಾಗಿ ಹೋಗಲಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರೋಪಕ್ಕೂ ತಿರುಗೇಟು ಕೊಟ್ಟ ಅಶೋಕ್, ಯಾರೋ ಕಟ್ಟಿದ ಹುತ್ತದಲ್ಲಿ ಕರಿನಾಗರ ಹಾವು ಸೇರಿಕೊಂಡಂತೆ ಕಾಂಗ್ರೆಸ್ನಲ್ಲಿ ಸೇರಿಕೊಂಡಿದ್ದಾರೆ ಎಂದು ಹರಿಹಾಯ್ದರು. ನಾವು ಕಾಂಗ್ರೆಸಿಗರ ಮನೆ ಹಾಳಾಗಲಿ ಎಂದು ಹೇಳುವುದಿಲ್ಲ. ಸಿದ್ದರಾಮಯ್ಯನವರ ಮನೆಯೇ ಹಾಳಾಗಿ ಹೋಗಲಿ. ಇಂಥ ನೂರು ಸಿದ್ದರಾಮಯ್ಯನವರು ಬಂದರೂ ಬಿಜೆಪಿ ಮನೆಯನ್ನು ಯಾರೂ ಕೂಡ ಹಾಳು ಮಾಡಲು ಸಾಧ್ಯವಿಲ್ಲ ಎಂದರು.
ಮೊದಲು ಕಾಂಗ್ರೆಸ್ ಮನೆ ಹಾಳಾಗಿ ಹೋಗಲಿ. ದೇಶದಲ್ಲೇ ಅವರ ಪಕ್ಷದ ಮನೆ ಖಾಲಿಯಾಗಿದೆ. ಇನ್ನು ನಮ್ಮ ಮನೆಯನ್ನು ಯಾರೂ ಕೂಡ ಖಾಲಿ ಮಾಡಲು ಸಾಧ್ಯವಿಲ್ಲ. ಮೊದಲು ಸಿದ್ದರಾಮಯ್ಯ ಕುರ್ಚಿಯನ್ನು ಗಟ್ಟಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಈ ದೇಶದಲ್ಲಿ ಉಗ್ರರನ್ನು ಪೋಷಣೆ ಮಾಡಿದ್ದೇ ಕಾಂಗ್ರೆಸಿಗರು. ವೋಟ್ ಬ್ಯಾಂಕ್ಗಾಗಿ ಅಲ್ಪಸಂಖ್ಯಾತರನ್ನುತುಷ್ಟೀಕರಣ ಮಾಡಿದ್ದೇ ಇವರದೇ ಪಕ್ಷ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದವರು ಇವರ ಬ್ರದರ್ಸ್ಗಳು. ಇಂಥವರಿಂದ ನಾವು ಪಾಠ ಕಲಿಯಬೇಕೇ? ಎಂದು ಪ್ರಶ್ನಿಸಿದರು.
ನಮ್ಮ ಪಕ್ಷದ ಕಾರ್ಯಕರ್ತರು ಈ ಬಾರಿ ನರೇಂದ್ರಮೋದಿ ಅವರ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆದ್ದು ದಾಖಲೆ ಸೃಷ್ಟಿಸಲಿದ್ದಾರೆ ಎಂಬ ವಿಶ್ವಾಸವನ್ನು ಅಶೋಕ್ ವ್ಯಕ್ತಪಡಿಸಿದರು.