ಮೈಸೂರು: ಜಿಪಿಐಇಆರ್ ರಂಗ ತಂಡದ ವತಿಯಿಂದ ಮಾ.೨೭ರಿಂದ ೩೧ರವರೆಗೆ ನಗರದ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ರಾಷ್ಟ್ರೀಯ ರಂಗೋತ್ಸವ ಆಯೋಜಿಸಲಾಗಿದೆ ಎಂದು ಹಿರಿಯ ರಂಗಕರ್ಮಿ ಮೈಮ್ ರಮೇಶ್ ತಿಳಿಸಿದರು.
ಮಾ.೨೭ರಂದು ಸಂಜೆ ೬ ಗಂಟೆಗೆ ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ರಂಗ ಉತ್ಸವ ಉದ್ಘಾಟಿಸುವರು. ರಂಗ ನಿರ್ದೇಶಕ ಪ್ರೊ.ಎಚ್.ಎಸ್.ಉಮೇಶ್ ಅಧ್ಯಕ್ಷತೆ ವಹಿಸುವರು. ಹಿರಿಯ ಭರತನಾಟ್ಯ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ, ನಟ ಅರುಣ್ ಸಾಗರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹಿರಿಯ ರಂಗಕರ್ಮಿ ರಾಜಶೇಖರ್ ಕದಂಬ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಉಪಸ್ಥಿತರಿರುವರು. ಸಮಾರೋಪ ಸಮಾರಂಭ ಮಾ.೩೧ ರಂದು ಸಂಜೆ ೬ ಗಂಟೆಗೆ ನಡೆಯಲಿದ್ದು, ಹಿರಿಯ ರಂಗಕರ್ಮಿ ಬಿ.ಸುರೇಶ್ ಸಮಾರೋಪ ನುಡಿಗಳನ್ನಾಡುವರು. ಪ್ರೊ.ಎಸ್.ಆರ್.ರಮೇಶ್, ಜನಾರ್ಧನ್ (ಜನ್ನಿ), ಎಚ್.ಎಸ್.ಸುರೇಶ್ಬಾಬು, ಇನ್ನಿತರರು ಅತಿಥಿಗಳಾಗಿರುವರು ಎಂದರು.
ಮಾ.೨೭ ರಂದು ಸಂಜೆ ೭ ಗಂಟೆಗೆ ಕೇರಳ ತಂಡದಿಂದ ಬಾವಲ್ ಮಲೆಯಾಳಂ ನಾಟಕ, ೨೮ರಂದು ಸಂಜೆ ೫.೩೦ಕ್ಕೆ ದೇವಾನಂದ್ ವರಪ್ರಸಾದ್ ತಂಡದಿಂದ ತತ್ವಪದ ಗಾಯನ, ರಾತ್ರಿ ೭ ಗಂಟೆಗೆ ಜಿಪಿಐಇಆರ್ ತಂಡದಿಂದ ಮಂಟೇಸ್ವಾಮಿ ಕಥಾ ಪ್ರಸಂಗ, ಮಾ.೨೯ರ ಸಂಜೆ ೫.೩೦ಕ್ಕೆ ಡಾ.ಮೈಸೂರು ಗುರುರಾಜ್ ಮತ್ತು ತಂಡದಿಂದ ತಂಬೂರಿ ಜಾನಪದ ಗಾಯನ, ೭ ಗಂಟೆಗೆ ಉಡುಪಿಯ ಅಮೋಘ ತಂಡದಿಂದ ರೈಲು ಭೂತ ತುಳು ನಾಟಕ ಪ್ರದರ್ಶನವಿರಲಿದೆ.
ಮಾ.೩೦ ರಂದು ಸಂಜೆ ೫.೩೦ಕ್ಕೆ ವಾಸು ದೀಕ್ಷಿತ್ ಕಲೆಕ್ಟಿವ್ ಸಂಗೀತ ಕಾರ್ಯಕ್ರಮ, ರಾತ್ರಿ ೭ ಗಂಟೆಗೆ ಕಹೆ ವಿದುಶಕ್ ಫೌಂಡೇಷನ್ನಿಂದ ಸಕಲ್ ಜಾನಿ ಹೇ ನಾಥ್ ಹಿಂದಿ ನಾಟಕ, ಮಾ.೩೧ ರ ಸಂಜೆ ೫.೩೦ಕ್ಕೆ ಮಂಗಳೂರಿನ ತಂಡದಿಂದ ಸಿಂಗಾರಿ ಮೇಳಂ ತತ್ವಮಸಿ ಕಾರ್ಯಕ್ರಮ, ರಾತ್ರಿ ೭ ಗಂಟೆಗೆ ಬೆಂಗಳೂರಿನ ರಂಗ ಪಯಣ ತಂಡದಿಂದ ನವರಾತ್ರಿಯ ಕೊನೆ ದಿನ ಕನ್ನಡ ನಾಟಕ ಪ್ರದರ್ಶನವಿರಲಿವೆ. ಪ್ರತಿ ನಾಟಕಕ್ಕೆ ನೂರು ರೂ., ಪ್ರವೇಶ ದರವಿದ್ದು ನಿಗದಿ ಮಾಡಲಾಗಿದೆ.