ವರನಟ ಡಾ.ರಾಜ್ ಕುಮಾರ್ ಅವರ ೧೮ನೇ ಪುಣ್ಯ ಸ್ಮರಣೆಯನ್ನು ಇಂದು ಶುಕ್ರವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಯಲ್ಲಿ ಆಚರಿಸಲಾಯಿತು. ಅಣ್ಣಾವ್ರ ಮಕ್ಕಳಾದ ರಾಘವೇಂದ್ರ ರಾಜಕುಮಾರ್, ಪೂರ್ಣಿಮಾ, ಲಕ್ಷ್ಮಿ ಸೇರಿದಂತೆ ಕುಟುಂಬದ ಸದಸ್ಯರು ಆಗಮಿಸಿ ಪೂಜೆ ಸಲ್ಲಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಡಾ.ರಾಜ್ ಕುಮಾರ್ ಅಭಿಮಾನಿಗಳು ಸಮಾಧಿ ಬಳಿ ರಕ್ತದಾನ ಶಿಬಿರ, ಅನ್ನ ಸಂತರ್ಪಣೆ, ಕಣ್ಣುದಾನ ಸೇರಿದಂತೆ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿದರು. ಅಣ್ಣಾವ್ರ ಸಮಾಧಿ ದರ್ಶನಕ್ಕಾಗಿ ಸಾಲುಗಟ್ಟಿ ಅಭಿಮಾನಿಗಳು ನಿಂತು ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಸಮಾಧಿ ಹತ್ತಿರ ಬಂದಾಗಷ್ಟೇ ಅಪ್ಪಾಜಿ ನಮ್ಮೊಂದಿಗೆ ಇಲ್ಲ ಅಂತ ಅನಿಸತ್ತೆ. ಅದರಾಚೆ ಅವರು ನಮ್ಮೊಂದಿಗೆ ಸದಾ ಇದ್ದಾರೆ, ಇರುತ್ತಾರೆ ಎಂದರು. ಅಭಿಮಾನಿಗಳ ಜೊತೆ ಒಂದಷ್ಟು ಹೊತ್ತು ರಾಘಣ್ಣ ಇದ್ದರು.