ಮೈಸೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಲೆ ಇದ್ದು, ಬಿಜೆಪಿ ಪಕ್ಷ ದೂಳಿಪಟವಾಗಲಿದೆ, ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ರವರ ಗೆಲುವು ಖಚಿತವಾಗಿದೆ ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ವರುಣಾ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರವಾಗಿ ಗುರುವಾರ ಮತಯಾಚಿಸಿ ಗ್ಯಾರಂಟಿ ಕಾರ್ಡ್ ವಿತರಿಸಿ ಮಾತನಾಡಿದ ಅವರು ಮೋದಿ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು ಇವರು ಮಾಡುವ ಭ್ರಷ್ಟಾಚಾರ ಯಾರಿಗೂ ಗೊತ್ತಾಗುವುದಿಲ್ಲ. ಏಕೆಂದರೆ ಮಾಧ್ಯಮಗಳೆಲ್ಲಾ ಬಿಜೆಪಿ ಸರ್ಕಾರದ ನಿಯಂತ್ರಣದಲ್ಲಿವೆ. ದೇಶದಲ್ಲಿ ದಲಿತರು, ಹಿಂದುಳಿದವರ ಜನಸಂಖ್ಯೆ ಹೆಚ್ಚಾಗಿದ್ದು ಜಾತಿಗಣತಿ ಮಾಡಿ ಜನಸಂಖ್ಯೆಗೆ ಅನುಗುಣವಾಗಿ ಪ್ರತಿಯೊಂದು ವರ್ಗಕ್ಕೂ ಮೀಸಲಾತಿ ನೀಡಬೇಕು. ಶೇ.೩ ರಷ್ಟಿರುವವರಿಗೆ ಶೇ. ೧೦ ಮೀಸಲಾತಿ ಕೊಟ್ಟಿದ್ದಾರೆ. ಆದ್ದರಿಂದ ಮೀಸಲಾತಿ ಹೆಚ್ಚಾಗಬೇಕು. ದೇಶದಲ್ಲಿ ಬಡತನ ನಿರ್ಮೂಲನೆಯಾಗಬೇಕಾದರೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು.
ರಾಜ್ಯದಲ್ಲಿ ೧.೫ ಕೋಟಿ ಕುಟುಂಬಗಳು ಗ್ಯಾರಂಟಿ ಯೋಜನೆ ಪಡೆಯುತ್ತಿದ್ದು, ೪.೫ ಕೋಟಿಗೂ ಹೆಚ್ಚು ಜನರು ಗ್ಯಾರಂಟಿ ಸ್ಕೀಂ ಫಲಾನುಭವಿಗಳಾಗಿದ್ದಾರೆ. ಚುನಾಯಿತ ಬಿಜೆಪಿ ಸರ್ಕಾರ ಸುಲಿಗೆ ದಂದೆಗಿಳಿದಿದ್ದು ೪೦೦ ಸೀಟು ಗೆದ್ದರೆ ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಸಂವಿಧಾನ ಬದಲಾದರೆ ದೇಶದಲ್ಲಿ ಸರ್ವಾಧಿಕಾರಿ ಸರ್ಕಾರ ನಿರ್ಮಾಣವಾಗುತ್ತದೆ. ಆದ್ದರಿಂದ ಸಂವಿಧಾನ ಉಳಿವಿಗೆ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ರವರನ್ನು ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಕೆಂಪೀರಯ್ಯ, ಎಪಿಎಂಸಿ ಮಾಜಿ ಸದಸ್ಯ ಬಸವರಾಜು, ತಾ.ಪಂ. ಮಾಜಿ ಸದಸ್ಯರಾದ ಮಹೇಂದ್ರ, ಪುಟ್ಟಣ್ಣ, ಎಂ.ಟಿ. ರವಿಕುಮಾರ್, ಜಿ.ಕೆ. ಬಸವಣ್ಣ, ರಾಯನಹುಂಡಿ ರವಿ, ರಾಮು, ಸೋಮಣ್ಣ, ನಾಗರಾಜು, ದೇವಯ್ಯ, ಸಕಳ್ಳಿ ಬಸವರಾಜು, ರೂಪೇಶ್ ಉಪಸ್ಥಿತರಿದ್ದರು.