ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಧ್ಯಸ್ಥಗಾರರೊಂದಿಗೆ ಸರಿಯಾದ ಸಮಾಲೋಚನೆಯ ನಂತರ ಚುನಾವಣಾ ಬಾಂಡ್ ಯೋಜನೆಯನ್ನು ಮರಳಿ ತರುವ ಸಾಧ್ಯತೆಯ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಳಿವು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ನಾವು ಇನ್ನೂ ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ಮಾಡಬೇಕಿದೆ. ಎಲ್ಲರಿಗೂ ಸ್ವೀಕಾರಾರ್ಹವಾದ ಯೋಜನೆ ತಯಾರಿಗೆ ನಾವು ಏನು ಮಾಡಬೇಕು ನೋಡೋಣ. ಪ್ರಾಥಮಿಕವಾಗಿ ಪಾರದರ್ಶಕತೆ ಉಳಿಸಿಕೊಳ್ಳಬೇಕು ಎಂದು ಹೇಳಿದರು. ಕಪ್ಪುಹಣದ ಸಾಧ್ಯತೆಯನ್ನು ಇದು (ಚುನಾವಣಾ ಬಾಂಡ್) ಸಂಪೂರ್ಣವಾಗಿ ತೆಗೆದುಹಾಕುತ್ತದೆ. ಆದರೆ ಸುಪ್ರೀಂ ಕೋರ್ಟ್ (ಎಸ್ಸಿ) ನೀಡಿದ ತೀರ್ಪನ್ನು ಮರುಪರಿಶೀಲಿಸಬೇಕೆ ಎಂದು ಕೇಂದ್ರ ಸರ್ಕಾರ ಇನ್ನೂ ನಿರ್ಧರಿಸಿಲ್ಲ. ಸುಪ್ರೀಂಕೋರ್ಟ್ ರದ್ದು ಮಾಡಿದ ಪ್ರಸ್ತುತ ಯೋಜನೆಯು ಪಾರದರ್ಶಕತೆ ಹೊಂದಿದೆ ಎಂದೂ ತಿಳಿಸಿದರು.
ಬಾಂಡ್ ಮೂಲಕ ದೇಣಿಗೆ ನೀಡಿದವರ ಮತ್ತು ಬಾಂಡ್ ಮೂಲಕ ದೇಣಿಗೆ ಪಡೆದ ಪಕ್ಷದ ಮಾಹಿತಿಯನ್ನು ಗೌಪ್ಯವಾಗಿ ಉಳಿಸಿಕೊಳ್ಳುವ ಚುನಾವಣಾ ಬಾಂಡ್ ಯೋಜನೆಯನ್ನು ಕೇಂದ್ರ ಸರ್ಕಾರವು ಜನವರಿ ೨, ೨೦೧೮ ರಂದು ಆರಂಭಿಸಿದೆ. ಆದರೆ ಇದು ಪಾರದರ್ಶಕತೆ ಹೊಂದಿಲ್ಲ ಎಂದು ಫೆಬ್ರವರಿ ೨೦೨೪ ರಲ್ಲಿ, ಐದು ನ್ಯಾಯಾಧೀಶರ ಸಂವಿಧಾನ ಪೀಠವು ಈ ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿದೆ.