ಮಂಗಳೂರು(ದಕ್ಷಿಣ ಕನ್ನಡ): ಆಟೋ ಚಾಲಕರು ಮತ್ತು ರೈಲು ಪ್ರಯಾಣಿಕರು ಹೊಡೆದಾಡುವ ವೀಡಿಯೊ ಮಂಗಳೂರಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದ ಹೊರಗೆ ವಾಗ್ವಾದ ನಡೆದ ಘಟನೆ ಇದಾಗಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚೆನ್ನೈನಿಂದ ದಂಪತಿ ಬಂದಿದ್ದು, ಅವರನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯಲು ಇಬ್ಬರು ಬಂದಿದ್ದರು. ರೈಲು ನಿಲ್ದಾಣದಲ್ಲಿ ನಿಗದಿತ ಸ್ಥಳಗಳಲ್ಲಿ ಮಾತ್ರ ವಾಹನ ಪಾರ್ಕಿಂಗ್ ಮಾಡಬೇಕು. ನಿಲ್ದಾಣದ ಮುಂದಿನ ಮುಖ್ಯ ಗೇಟ್ ಬಳಿ ಪಿಕಪ್ ಮತ್ತು ಡ್ರಾಪ್ಗೆ ಮಾತ್ರ ಅನುಮತಿಯಿದ್ದು ಖಾಲಿ ವಾಹನ ತರುವುದಕ್ಕೆ ಅವಕಾಶ ಇಲ್ಲ. ಈ ವಿಚಾರದಲ್ಲಿ ರೈಲು ಪ್ರಯಾಣಿಕರನ್ನು ಕರೆದೊಯ್ಯಲು ಬಂದಿದ್ದ ಇಬ್ಬರು ಮತ್ತು ಪಾರ್ಕಿಂಗ್ ನೋಡಿಕೊಳ್ಳುವ ಚಂದನ್ ಎಂಬ ವ್ಯಕ್ತಿ ನಡುವೆ ವಾಗ್ವಾದ ನಡೆದಿದೆ. ಚಂದನ್ ಪರವಾಗಿ ಆಟೊ ರಿಕ್ಷಾ ಚಾಲಕರು ಮಧ್ಯಪ್ರವೇಶಿಸಿದ್ದಾರೆ. ಆ ನಂತರ ವಾಗ್ವಾದ ತಾರಕಕ್ಕೇರಿದ್ದು, ಪ್ರಯಾಣಿಕರ ಜೊತೆಗೆ ಆಟೊ ಚಾಲಕರು ಜಗಳವಾಡಿದ್ದಾರೆ. ಈ ದೃಶ್ಯವನ್ನು ಸಾರ್ವಜನಿಕರು ಮೊಬೈಲಿನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.
ಹೊಡೆದಾಟ ನಡೆಸಿದ ಆಟೊ ಚಾಲಕರ ಗುರುತು ಪತ್ತೆಹಚ್ಚಲಾಗಿದೆ. ಪ್ರಯಾಣಿಕರ ಗುರುತನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಈ ವಿಷಯದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.