ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕಳೆದ ಎಂಟು ವರ್ಷಗಳಿಂದ ಮೈಸೂರು ಜಿಲ್ಲೆ ಮಲೇರಿಯಾ ಮುಕ್ತವಾಗಿದ್ದು ಅದರಂತೆ ಡೆಂಗ್ಯೂ ಮುಕ್ತವನ್ನಾಗಿಸಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಹೇಳಿದರು.
ಕೆ.ಆರ್.ನಗರ ಪಟ್ಟಣದ ಸಾರಿಗೆ ನಗರದಲ್ಲಿರುವ ಯಡತೊರೆ ವಿದ್ಯಾ ಸಂಸ್ಥೆಯ ಬಿಇಡಿ ಕಾಲೇಜಿನಲ್ಲಿ ಗುರುವಾರ ನಡೆದ ವಿಶ್ವ ಮಲೇರಿಯಾ ದಿನಾಚರಣೆ ಮತ್ತು ಮಾನವನ ಆರೋಗ್ಯದ ಮೇಲೆ ತಾಪಮಾನದ ಪರಿಣಾಮ ಕುರಿತು ಉಪನ್ಯಾಸ ನೀಡಿದ ಅವರು ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಸೊಳ್ಳೆ ನಿಯಂತ್ರಣ ಮಾಡಿದರೆ ರೋಗದಿಂದ ದೂರವಿರಬಹುದು ಎಂದರು.
ಈ ಮಾನ್ಸೂನ್ ಮಳೆಗಾಲ ಆರಂಭವಾಗಿದ್ದು ಮನೆಗಳ ಸುತ್ತ ಅನಗತ್ಯವಾಗಿ ನೀರು ನಿಲ್ಲುವುದನ್ನು ತಡೆಗಟ್ಟಬೇಕೆಂದು ಸಲಹೆ ನೀಡಿದ ಅವರು ಸರ್ವರೋಗಕ್ಕೂ ಸೊಳ್ಳೆಗಳೇ ಮೂಲವಾಗಿದ್ದು ಅವುಗಳ ನಿರ್ಮೂಲನಕ್ಕೆ ಇರುವ ಎಲ್ಲಾ ಮಾರ್ಗಗಳನ್ನು ಜನರು ಅನುಸರಿಸಿ ಆರೋಗ್ಯವಂತರಾಗಿ ಇರಬೇಕು ಎಂದು ತಿಳಿಸಿದರು.
ದಿನದಿಂದ ದಿನಕ್ಕೆ ಜಗತ್ತಿನ ತಾಪಮಾನ ಹೆಚ್ಚಾಗುತ್ತಿದ್ದು ಇದರಿಂದಲೂ ಸಹ ಮನುಷ್ಯನಿಗೆ ಹಲವು ಕಾಯಿಲೆಗಳು ಬರುವ ಸಾಧ್ಯತೆ ಇರುವುದರಿಂದ ಎಲ್ಲರೂ ಪರಿಸರ ರಕ್ಷಣೆಯ ಜೊತೆಗೆ ತಾಪಮಾನದಿಂದ ರಕ್ಷಣೆ ಮಾಡಿಕೊಳ್ಳಲು ಎಲ್ಲರೂ ವೈದ್ಯರು ನೀಡುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳನ್ನು ಪಾಲಿಸಬೇಕೆಂದು ಕಿವಿ ಮಾತು ಹೇಳಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಉಪಪ್ರಾಂಶುಪಾಲೆ ಜಯರತ್ನ, ಉಪನ್ಯಾಸ ಮಹದೇವ್, ವ್ಯವಸ್ಥಾಪಕ ಲೋಕೇಶ್ಭರಣಿ ಮಾತನಾಡಿ ರೋಗ ನಿರ್ಮೂಲನೆ ಮತ್ತು ಆರೋಗ್ಯ ಪಾಲನೆಯ ಬಗ್ಗೆ ಪ್ರಶಿಕ್ಷಣಾರ್ಥಿಗಳಿಗೆ ಸಲಹೆಗಳನ್ನು ನೀಡಿದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹೆಚ್.ಜೆ.ಮಹೇಶ್, ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕಿ ಬೇಬಿರೇಖಾ, ಆರೋಗ್ಯ ನಿರೀಕ್ಷಾಣಾಧಿಕಾರಿಗಳಾದ ಮಹೇಶ್, ಭರತ್, ಆರೋಗ್ಯ ಸಂರಕ್ಷಣಾಧಿಕಾರಿಗಳಾದ ಪಾರ್ವತಿ, ಸುಮಲತಾ, ಉಪನ್ಯಾಸಕರಾದ ಮಹೇಶ್ವರಿಸ್ವಾಮಿ, ಮೋಹನ್ಕುಮಾರಿ ಮತ್ತು ಪ್ರಶಿಕ್ಷಣಾರ್ಥಿಗಳು ಇದ್ದರು.