ನವದೆಹಲಿ: ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಿಭವ್ ಕುಮಾರ್ ಅವರನ್ನು ಮುಖ್ಯಮಂತ್ರಿ ನಿವಾಸದ ಹಿಂದಿನ ಗೇಟ್ನಿಂದ ಹೊರಗಿನಿಂದ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಮಲಿವಾಲ್ ದೂರಿನ ಮೇರೆಗೆ ದೆಹಲಿ ಪೊಲೀಸರು ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಮೇ ೧೩ ರಂದು ಮುಖ್ಯಮಂತ್ರಿಗಳ ನಿವಾಸಕ್ಕೆ ಹೋದಾಗ ಬಿಭವ್ ಕುಮಾರ್ ತನ್ನ ಮೇಲೆ ೭-೮ ಬಾರಿ ಕಪಾಳಮೋಕ್ಷ ಮಾಡಿದ್ದ ಹಾಗೂ ಎದೆ ಮತ್ತು ಹೊಟ್ಟೆಗೆ ಒದ್ದಿದ್ದ ಎಂದು ಮಲಿವಾಲ್ ದೂರಿನಲ್ಲಿ ಆರೋಪ ಮಾಡಿದ್ದಾರೆ.
ತನಗೆ ಪಿರಿಯಡ್ಸ್ ಆಗುತ್ತಿದೆ ಎಂದು ಹೇಳಿದ ನಂತರವೂ ಬಿಭವ್ ನಿಂದ ಕ್ರೂರ ಹಲ್ಲೆ ನಿಲ್ಲಲಿಲ್ಲ ಎಂದು ಮಲಿವಾಲ್ ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಶುಕ್ರವಾರ, ದೆಹಲಿ ಪೊಲೀಸರು ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಮಲಿವಾಲ್ ಅವರನ್ನು ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಕರೆದೊಯ್ದರು. ತೀಸ್ ಹಜಾರಿ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆಯನ್ನೂ ದಾಖಲಿಸಲಾಗಿದೆ.
ಈ ನಡುವೆ, ಬಿಭವ್ ಕುಮಾರ್ ಅವರು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಪ್ರತಿದೂರು ದಾಖಲಿಸಿದ್ದಾರೆ, ಮಲಿವಾಲ್ ಅವರು “ಬಲವಂತವಾಗಿ ಮತ್ತು ಅನಧಿಕೃತವಾಗಿ” ಮುಖ್ಯಮಂತ್ರಿಯ ನಿವಾಸಕ್ಕೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಾಜಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷರು, ಸಿಎಂ ನಿವಾಸದಲ್ಲಿ ಗದ್ದಲ ಸೃಷ್ಟಿಸಲು ಹಾಗೂ ತಮ್ಮ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು ಎಂದು ಅವರು ಹೇಳಿದ್ದಾರೆ. ರಾಜ್ಯಸಭಾ ಸಂಸದರು ಎಎಪಿ ಮುಖ್ಯಸ್ಥರಿಗೆ ಹಾನಿ ಮಾಡುವ ಉದ್ದೇಶ ಹೊಂದಿದ್ದರು, ಇದಕ್ಕೆ ನಾನು ಬಲವಾಗಿ ಆಕ್ಷೇಪಿಸಿದ್ದೆ ಎಂದು ಕೇಜ್ರಿವಾಲ್ ಸಹಾಯಕರು ಹೇಳಿದ್ದಾರೆ.