ಮಂಡ್ಯ : ಕಳೆದ ವರ್ಷ ಇಡೀ ದೇಶವೇ ಬೆಚ್ಚಿ ಬೀಳಿಸುವಂತೆ ಮಂಡ್ಯ ಜಿಲ್ಲೆಯಲ್ಲಿ ಭ್ರೂಣಲಿಂಗ ಹತ್ಯೆ ಪ್ರಕರಣ ನಡೆದಿತ್ತು. ಇದೀಗ ಇತ್ತೀಚಿಗೆ ಪಾಂಡವಪುರದಲ್ಲೂ ಕೂಡ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಒಂದು ಘಟನೆ ಕುರಿತಂತೆ ಮಂಡ್ಯ ಸಂಸದ ಅಂಬರೀಶ್ ರವರು ಸರ್ಕಾರದ ವಿರುದ್ಧ ಕಿಡಿ ಕಾರಿಂದು ಭ್ರೂಣಲಿಂಗ ಪತ್ತೆ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ಅಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಮಂಡ್ಯ ಜಿಲ್ಲೆಯ ಹಲವೆಡೆ ಹಲವು ತಿಂಗಳುಗಳ ಹಿಂದೆಯೇ ಬೆಳಕಿಗೆ ಬಂದ ಭ್ರೂಣಲಿಂಗ ಪತ್ತೆ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಹಾಗೂ ತಪ್ಪಿತಸ್ಥರನ್ನು ಶಿಕ್ಷಿಸಲು ರಾಜ್ಯ ಸರ್ಕಾರ ವಿಫಲವಾಗಿರುವುದು ವಿಷಾದನೀಯ ಹಾಗೂ ಖಂಡನೀಯ.
ಭ್ರೂಣ ಲಿಂಗ ಪತ್ತೆಯಿಂದಾಗಿ ಅದೆಷ್ಟೋ ಹೆಣ್ಣು ಶಿಶುಗಳು ಗರ್ಭದಿಂದ ಹೊರಬಂದು, ಹೊರ ಜಗತ್ತನ್ನು ಕಾಣುವ ಮೊದಲೇ ಹತ್ಯೆಯಾಗುತ್ತಿದ್ದಾರೆ. ಓರ್ವ ತಾಯಿಯಾಗಿ ಇಂತಹ ಹೇಯ ಕೃತ್ಯದ ಬಗ್ಗೆ ತಿಳಿದು ನೋವಾಗುತ್ತಿದೆ. ರಾಜ್ಯ ಸರ್ಕಾರ ಈ ರಾಕ್ಷಸ ಪ್ರವೃತ್ತಿಯ ಪ್ರಕರಣಗಳನ್ನು ಲಘುವಾಗಿ ಪರಿಗಣಿಸದೆ ಈ ಕೂಡಲೇ ಅಗತ್ಯ ಕ್ರಮ ಕೈಗೊಂಡು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ, ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದೇನೆ.