ಮೈಸೂರು: ಆರೋಗ್ಯ ಇಲಾಖೆಯಲ್ಲಿನ ಅರೆಕಾಲಿಕ ವೈದ್ಯರು ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುವುದಕ್ಕೆ ನಿರ್ಬಂಧ ಹೇರಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಹಿಂದೆ ವೈದ್ಯರ ಕೊರತೆ ಇತ್ತು. ಆದ್ದರಿಂದ ಸಾರ್ವಜನಿಕರಿಗೆ ಸೇವೆ ಸಿಗಲಿ ಎನ್ನುವ ಕಾರಣಕ್ಕೆ ವೈದ್ಯರು ಕ್ಲಿನಿಕ್ ನಡೆಸಲು ಸರ್ಕಾರವೇ ಅವಕಾಶ ಮಾಡಿಕೊಟ್ಟಿತ್ತು. ಸರ್ಕಾರಿ ವೈದ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಸೇವೆ ಮಾಡಬೇಕು. ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವವರು ಮಾತ್ರ ಕ್ಲಿನಿಕ್ ನಡೆಸಲು ಈಗ ಅವಕಾಶ ಇದೆ. ಅದರಿಂದ ಆಗುತ್ತಿರುವ ಸಮಸ್ಯೆಗಳನ್ನು ಗಮನಿಸಿ ಪುನರ್ ಪರಿಶೀಲನೆಗೆ ಮುಂದಾಗಿರುವುದಾಗಿ ತಿಳಿಸಿದರು.
ಹೊಸ ಆಸ್ಪತ್ರೆಗಳನ್ನು ನಿರ್ಮಿಸುವುದು ದೊಡ್ಡದಲ್ಲ. ಇರುವ ಆಸ್ಪತ್ರೆಗಳಿಗೆ ಸೌಕರ್ಯ ಕಲ್ಪಿಸಲಾಗಿದೆ. ಮೈಸೂರಿನ ಆಸ್ಪತ್ರೆಗಳಲ್ಲೂ ಅರೆ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಕೆ.ಆರ್. ಆಸ್ಪತ್ರೆ ಟೆಲಿ ಹಬ್, ಜಿಲ್ಲಾಸ್ಪತ್ರೆಗೆ ಭೇಟಿ ನೀಡುತ್ತಿದ್ದೇನೆ. ಕುಂದುಕೊರತೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಹಿಂದೆ ವೈದ್ಯರ ಕೊರತೆ ಇದ್ದ ಕಾರಣ ಎರೆಡು ಕಡೆಗಳಲ್ಲಿ ಕೆಲಸ ಮಾಡಲು ಅವಕಾಶ ಕೊಡಲಾಗಿತ್ತು. ಈಗ ಅಂತಹ ಸಮಸ್ಯೆಗಳಿಲ್ಲ. ಹೀಗಾಗಿ ಸರ್ಕಾರದ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಆದೇಶಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಮಾಹಿತಿ ನೀಡಿದರು.
ಚಾಮರಾಜನಗರ ಆಕ್ಸಿಜನ್ ದುರಂತ ವಿಚಾರ ಕುರಿತು ಪ್ರತಿಕ್ರಿಯಿಸಿ, ಮರು ತನಿಖೆಗೆ ಒಪ್ಪಿಗೆ ಕೊಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಯಾವ ಅಂಶಗಳ ಆಧಾರದ ಮೇಲೆ ಮರು ತನಿಖೆಯಾಗಬೇಕು ಎಂಬ ಚಾರ್ಚ್ ಫ್ರೇಮ್ ಮಾಡಿಕೊಡಿ ಎಂದು ಸರ್ಕಾರದಿಂದ ಮತ್ತೆ ಪತ್ರ ಬಂದಿದೆ. ಈಗ ನಾವು ತನಿಖೆಯಾಗಬೇಕಿರುವ ಚಾರ್ಚ್ ಫ್ರೇಮ್ ನ್ನು ಸಿದ್ಧ ಮಾಡುತ್ತಿದ್ದೇವೆ. ಚಾರ್ಚ್ ಫ್ರೇಮ್ ಪ್ರತಿಯನ್ನ ಶೀಘ್ರದಲ್ಲೇ ಸರ್ಕಾರಕ್ಕೆ ಕಳುಹಿಸುತ್ತೇವೆ ಸರ್ಕಾರ ನಂತರ ತೀರ್ಮಾನ ಕೈಗೊಳ್ಳುತ್ತದೆ. ಕಾಲ ಮೀತಿಯ ಒಳಗಡೆ ಈ ಬಗ್ಗೆ ಮರು ತನಿಖೆಯಾಗಬೇಕೆಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಕಾಂಗ್ರೆಸ್ ನಿಂದ ಬಂದವರಿಂದ ಬಿಜೆಪಿ ಶಿಸ್ತು ಕೆಟ್ಟಿತ್ತು ಎಂಬ ಕೆ.ಎಸ್ ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಕಾಂಗ್ರೆಸ್ ನಿಂದ ಬಂದ ಶಾಸಕರಿಂದ ಸರ್ಕಾರ ಮಾಡಿ 40, 50% ಕಮಿಷನ್ ಪಡೆದು ಈಗ ಈ ಮಾತು ಆಡಿದರೆ ಅವರನ್ನ ಯಾರು ನಂಬುತ್ತಾರೆ ಎಂದು ತಿರುಗೇಟು ನೀಡಿದರು.