ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದವರನ್ನು ಪ್ರೋತ್ಸಾಹಿಸಿ ಸನ್ಮಾನಿಸಿದರೆ ಅವರು ಭವಿಷ್ಯದಲ್ಲಿ ಮತ್ತಷ್ಟು ಎತ್ತರಕ್ಕೇರಲು ಸ್ಪೂರ್ತಿಯಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಸೆಂಟ್ರಲ್ ಸಿಲಬಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು ಕಳೆದ ಶೈಕ್ಷಣಿಕ ಸಾಲಿನಲ್ಲಿ ೯ನೇ ಸ್ಥಾನದಲ್ಲಿದ್ದ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರ ಈ ಬಾರಿ ೪ನೇ ಸ್ಥಾನಕ್ಕೇರಲು ಕಾರಣರಾದ ಶಿಕ್ಷಕ ಬಾಂಧವರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಕ್ಷೇತ್ರ ರಾಜ್ಯದಲ್ಲಿಯೇ ಉತ್ತಮ ಸ್ಥಾನ ಪಡೆಯುವಂತೆ ಕಾರ್ಯಯೋಜನೆ ರೂಪಿಸಿ ಅದರ ಅನುಷ್ಠಾನಕ್ಕೆ ಕೆಲಸ ಮಾಡಿದರೆ ಶಿಕ್ಷಣ ಇಲಾಖೆಗೆ ಎಲ್ಲಾ ಸಹಕಾರ ಮತ್ತು ವೈಯುಕ್ತಿಕವಾಗಿ ಆರ್ಥಿಕ ಸಹಾಯವನ್ನು ನೀಡುವುದಾಗಿ ಘೋಷಿಸಿದ ಶಾಸಕರು ಈ ವಿಚಾರದಲ್ಲಿ ನಾನು ಹೆಚ್ಚು ಕೇಂದ್ರಿಕೃತನಾಗಿ ಕೆಲಸ ಮಾಡುತ್ತೇನೆ ಎಂದರು.
ತಮ್ಮ ಮಕ್ಕಳಿಗೆ ಉತ್ತಮ ಮತ್ತು ಉನ್ನತ್ತ ಶಿಕ್ಷಣ ಕೊಡಿಸಲು ಪೋಷಕರು ಅತ್ಯಂತ ಮಹದಾಸೆಯಿಂದ ಶಿಕ್ಷಕರನ್ನು ನಂಬಿ ಶಾಲೆಗೆ ಕಳುಹಿಸುತ್ತಾರೆ ಅವರ ನಂಬಿಕೆಯನ್ನು ಹುಸಿ ಮಾಡದಂತೆ ಎಲ್ಲರೂ ನಡೆದುಕೊಳ್ಳಬೇಕು ಸಲಹೆ ನೀಡಿದರಲ್ಲದೆ ಇಂದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೊಡ್ಡ ಸಾಧನೆ ಮಾಡಬೇಕೆಂದು ಶುಭ ಹಾರೈಸಿದರು.
ಶೈಕ್ಷಣಿಕ ಬದುಕಿಗೆ ತಿರುವು ನೀಡುವ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವ್ಯಾಸಂಗ ಮಾಡುವಾಗ ಪ್ರತಿಯೊಬ್ಬ ವಿದ್ಯಾರ್ಥಿಯು ಪೋಷಕರ ನಿರೀಕ್ಷೆ ಮತ್ತು ಶಿಕ್ಷಕರ ಮಾರ್ಗದರ್ಶಕರನ್ನು ಚಾಚೂ ತಪ್ಪದೆ ಆಲಿಸಿ ಕಠಿಣ ಅಧ್ಯಯನ ಮಾಡಿ ಉತ್ತಮ ಅಂಕ ಗಳಿಸಬೇಕು ಎಂದು ಕಿವಿ ಮಾತು ಹೇಳಿದರು. ಈ ಸಂಧರ್ಭದಲ್ಲಿ ವಾಸವಿ ಸೆಂಟ್ರಲ್ ಸ್ಕೂಲ್ನಲ್ಲಿ ವ್ಯಾಸಂಗ ಮಾಡಿ ಉನ್ನತ್ತ ಶ್ರೇಣಿಯಲ್ಲಿ ತೇರ್ಗಡೆಯಾದ ಎಂ.ಬಿ.ಚಿನ್ಮಯಾಚಾರ್, ಆರ್.ತನ್ವಿ, ಕೆ.ಅಮುಲ್ಯ, ಎಸ್.ಎಸ್.ಹೇಮಶ್ರೀ, ಹೆಚ್.ಎಸ್.ಪವಿತ್ರ, ಭಾಂದವ್ಯಆಚಾರ್ಯ ಅವರಿಗೆ ವೈಯುಕ್ತಿಕವಾಗಿ ನಗದು ಬಹುಮಾನ ನೀಡಿದ ಶಾಸಕರು ಸನ್ಮಾನಿಸಿ ಗೌರವಿಸಿದರು.
ನಗರ ಯೋಜನ ಪ್ರಾಧಿಕಾರದ ನಿರ್ದೇಶಕಿ ಸರಿತಾಜವರಪ್ಪ, ಕಾಂಗ್ರೆಸ್ ಮುಖಂಡರಾದ ಹೊಸಕೋಟೆ ಹೆಚ್.ಪಿ.ಶಿವಕುಮಾರ್, ಮಂಚನಹಳ್ಳಿಧನು, ಸಮಾಜ ಸೇವಕ ಕೆ.ವಿ.ಜಯಣ್ಣ, ಪೋಷಕರಾದ ಶಾಂತಕುಮಾರಿ, ಕುಮಾರ್, ಹರ್ಷಿತ್, ಲತಾ, ನಿವೃತ್ತ ಶಿಕ್ಷಕ ಪ್ರಕಾಶ್ ಮತ್ತಿತರರು ಇದ್ದರು.