Sunday, April 20, 2025
Google search engine

Homeರಾಜಕೀಯಸಿಎಂ ಸಿದ್ದರಾಮಯ್ಯ ಹಣಕಾಸು ಸಚಿವರಾದರೂ ಅವರಿಗೆ ಹಗರಣ ತಿಳಿದಿಲ್ಲ, ಸಿಎಂ ಹಾಗೂ ಸಚಿವ ರಾಜೀನಾಮೆ ನೀಡಲಿ:...

ಸಿಎಂ ಸಿದ್ದರಾಮಯ್ಯ ಹಣಕಾಸು ಸಚಿವರಾದರೂ ಅವರಿಗೆ ಹಗರಣ ತಿಳಿದಿಲ್ಲ, ಸಿಎಂ ಹಾಗೂ ಸಚಿವ ರಾಜೀನಾಮೆ ನೀಡಲಿ: ಆರ್‌.ಅಶೋಕ ಆಗ್ರಹ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು ಸಚಿವರೂ ಆಗಿದ್ದಾರೆ. ಅವರ ಕಣ್ಣಿನ ಕೆಳಗೆಯೇ ಕೋಟ್ಯಂತರ ರೂಪಾಯಿ ಹಗರಣ ನಡೆದರೂ ಅವರಿಗೆ ತಿಳಿದಿಲ್ಲ. ಕೂಡಲೇ ಸಿಎಂ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿ, ಮೃತ ಪಿ.ಚಂದ್ರಶೇಖರನ್‌ ಅವರ ಕುಟುಂಬ ಕಷ್ಟದಲ್ಲಿದೆ. ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದರೂ, ತಮ್ಮ ಬಳಿಯೇ ಇರುವ ಹಣಕಾಸು ಇಲಾಖೆಯಿಂದ ಎಲ್ಲ ಮಾಹಿತಿ ಪಡೆದಿದ್ದರೂ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಮಾತ್ರ ಪಡೆಯುತ್ತಿಲ್ಲ. ಸರ್ಕಾರದ ಹಣವನ್ನು ಯಾರು ಹೇಗೆ ಬೇಕಾದರೂ ವರ್ಗಾವಣೆ ಮಾಡಬಹುದು ಎಂಬುದು ಇದರ ಅರ್ಥ. ಈ ಹಣದಲ್ಲಿ ಸೋನಿಯಾ ಗಾಂಧಿ ಅವರಿಗೂ ಪಾಲು ಸಿಕ್ಕಿದೆ ಎನ್ನುವುದು ನನ್ನ ಅನುಮಾನ ಎಂದರು.

ಆಂಧ್ರಪ್ರದೇಶದ ಜ್ಯುಬಿಲಿ ಹಿಲ್ಸ್‌ ಬ್ಯಾಂಕ್‌ಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ. ಜೊತೆಗೆ 9 ಐಟಿ ಕಂಪನಿಗಳಿಗೆ ವರ್ಗಾಯಿಸಲಾಗಿದೆ. ಈ ಹಣವನ್ನು ದಲಿತರ ಶ್ರೇಯಸ್ಸಿಗಾಗಿ ಇಡಲಾಗಿತ್ತು. ಇಂತಹ ಹಣವನ್ನೇ ಕಾಂಗ್ರೆಸ್‌ನವರು ಲೂಟಿ ಮಾಡುತ್ತಿದ್ದಾರೆ. ಇಲ್ಲಿ ಯಾರು ಮುಖ್ಯಮಂತ್ರಿ ಎಂಬುದೇ ಅರ್ಥವಾಗುತ್ತಿಲ್ಲ. ಇಲ್ಲಿ ಇಬ್ಬರು ಮುಖ್ಯಮಂತ್ರಿ ಹಾಗೂ ಸೂಪರ್‌ ಸಿಎಂ ಇದ್ದಾರೆ ಎಂದರು.

ಸಿದ್ದರಾಮಯ್ಯನವರ ಸರ್ಕಾರದಲ್ಲಿ ಲೂಟಿಯನ್ನು ತಡೆದವರು ನಿವೃತ್ತರಾಗಬೇಕು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕು. ಈ ಹಗರಣ ದೆಹಲಿಯನ್ನು ತಲುಪಿದ್ದು, ಮುಂದೆ ದೆಹಲಿ ನಾಯಕರ ವಿಚಾರವೂ ಬಹಿರಂಗವಾಗಲಿದೆ. ದಲಿತರಿಗೆ ಮೀಸಲಿಟ್ಟ ಹಣ ಎಲ್ಲಿಗೆ ಹೋಗಿದೆ ಎಂಬುದನ್ನು ಇನ್ನೂ ಪತ್ತೆ ಮಾಡಬೇಕಿದೆ. ಮಹಿಳೆಯರ ಅಕೌಂಟ್‌ಗೆ ಟಕಾಟಕ್‌ ಎಂದು ಹಣ ವರ್ಗಾವಣೆಯಾಗಲಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದರು. ಆದರೆ ಇಲ್ಲಿ ಐಟಿ ಕಂಪನಿಗಳ ಖಾತೆಗೆ ಟಕಾಟಕ್‌ ಎಂದು ವರ್ಗಾವಣೆಯಾಗಿದೆ ಎಂದು ದೂರಿದರು.

ಎಲ್ಲರೂ ಹಂಚಿದ್ದಾರೆ

ಸಮಪಾಲು, ಸಮಬಾಳು ಎಂಬಂತೆ ಸಚಿವ ಸಂಪುಟದಲ್ಲಿರುವ ಎಲ್ಲರೂ ಹಣವನ್ನು ಸಮಪಾಲು ಮಾಡಿಕೊಂಡಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳು ಮಾಡಿ, 187 ಕೋಟಿ ರೂ. ಲೂಟಿ ಮಾಡಲಾಗಿದೆ. ತಮ್ಮ ಕಣ್ಣಿನ ಕೆಳಗೆ ಇವೆಲ್ಲ ನಡೆಯುತ್ತಿದ್ದರೂ ಸಿದ್ದರಾಮಯ್ಯ ಮೂಕ ಪ್ರೇಕ್ಷಕರಂತೆ ನಿಂತಿದ್ದಾರೆ ಎಂದರು.

ಹಣ ವರ್ಗಾವಣೆಯಾಗಿರುವ ಐಟಿ ಕಂಪನಿಗಳು ಕಾಂಗ್ರೆಸ್ಸಿಗರ ಹಿಂಬಾಲಕರಾಗಿದ್ದಾರೆ. ಹೈದರಾಬಾದಿನ ಜ್ಯೂಬ್ಲಿ ಹಿಲ್ಸ್ ವರೆಗೂ ಯಾರೂ ಹೋಗುವುದಿಲ್ಲ ಎಂಬ ಕಾರಣಕ್ಕೆ ಅಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಕಾನೂನು ಪ್ರಕಾರ ಎಲ್ಲ ಅವಕಾಶ ಬಳಸಿಕೊಂಡು ಬಿಜೆಪಿ ಹೋರಾಟ ಮಾಡಲಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೂ ದಾಖಲೆ ಸಮೇತ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ತಪ್ಪಿಸಿಕೊಳ್ಳಲು ಎಸ್‌ಐಟಿ

ಈ ಹಗರಣದ ತನಿಖೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಸಿಐಡಿ ಬದಲು ಎಸ್‌ಐಟಿ ರಚಿಸಿದರೆ ಈ ಪ್ರಕರಣ ಮುಚ್ಚಿಹಾಕಬಹುದೆಂಬ ಉಪಾಯವನ್ನು ಸರ್ಕಾರ ಮಾಡಿದೆ. ಪದೇ ಪದೆ ತನಿಖಾ ಏಜೆನ್ಸಿ ಬದಲಿಸಲಾಗುತ್ತಿದೆ. ಆದ್ದರಿಂದ ಇದನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಸಿಂಪಥಿ ಸೃಷ್ಟಿಸಲು ಹಾಗೂ ದೇವೇಗೌಡರೇ ಇದನ್ನು ಮಾಡುತ್ತಿದ್ದಾರೆ ಎಂದು ಬಿಂಬಿಸಲು ಮಾಟ ಮಂತ್ರದ ಹೇಳಿಕೆ ನೀಡಿದ್ದಾರೆ. ಕೇರಳ ಸರ್ಕಾರ ಅದಕ್ಕಾಗಿ ಸ್ಪಷ್ಟನೆ ನೀಡಿ ಕಾಂಗ್ರೆಸ್‌ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಕರ್ನಾಟಕವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಇಷ್ಟು ಕಳಪೆಯಾಗಿದ್ದಾರೆ. ಇವರ ಗುಪ್ತಚರ ಸಂಸ್ಥೆ ವಿಫಲವಾಗಿದೆ. ಇದು ಜನರಿಗೆ ಮಾಡಿದ ಅಪಮಾನ. ಮುಖ್ಯಮಂತ್ರಿ ಈಗ ಕೇರಳ ಸರ್ಕಾರಕ್ಕೆ ಪತ್ರ ಬರೆಯಲಿ, ಇಲ್ಲವೆಂದರೆ ಜನರ ಕ್ಷಮೆ ಕೋರಲಿ ಎಂದರು.

RELATED ARTICLES
- Advertisment -
Google search engine

Most Popular