ಹಬ್ಬದ ರೀತಿಯಲ್ಲಿ ‘ಶಾಲಾ ಪ್ರಾರಂಭೋತ್ಸವ’ ಉತ್ತಮ ಆರಂಭ: ಶಂಶೀರ್ ಬುಡೋಳಿ ಅಭಿಮತ
ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ದ.ಕ.ಜಿ. ಪಂ. ಹಿ. ಪ್ರಾ. ಶಾಲೆ ಕರಂಬಾರು ಇಲ್ಲಿನ ‘ಶಾಲಾ ಪ್ರಾರಂಭೋತ್ಸವ’ವು ಅತ್ಯಂತ ಸಂಭ್ರಮ, ಸಡಗರದಿಂದ (ಮೇ 31) ನಡೆಯಿತು.
ಬಜ್ಪೆ ವಿಮಾನ ನಿಲ್ದಾಣ ದ್ವಾರದಿಂದ ಶಾಲೆಯವರೆಗೆ ಮೆರವಣಿಗೆ ಸಾಗಿ ಬಂತು. ಇದೇ ವೇಳೆ ಮಕ್ಕಳಿಗೆ ಸಿಹಿ ತಿಂಡಿ ಹಂಚಿ ಆ ನಂತರ ಶಾಲಾ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಮಾತನಾಡಿದ ಮುಖ್ಯ ಅತಿಥಿಯಾದ ಬ್ಯಾರಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯ ಶಂಶೀರ್ ಬುಡೋಳಿ, ಪ್ರಾಥಮಿಕ ಹಂತದಿಂದಲೇ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಹಬ್ಬದ ರೀತಿಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಮಾಡಿದ್ರೆ ಮಕ್ಕಳಿಗೆ ಶಾಲೆಗೆ ಹೋಗಲು ಮತ್ತಷ್ಟು ಹುಮ್ಮಸ್ಸು ಬರುತ್ತದೆ. ಹೀಗಾಗಿ ಶಿಕ್ಷಕರ ಜೊತೆಗೆ ಹೆತ್ತವರು, ಪೋಷಕರು ಕೂಡಾ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷ ಗುಣಪಲ್ ದೇವಾಡಿಗ ವಹಿಸಿದ್ದರು. ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ, ಎಸ್ ಡಿಎಂಸಿ
ಉಪಾಧ್ಯಕ್ಷೆ ಲಾವಣ್ಯ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಚಾರ್ಯ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಉಷಾ ಕಿರಣ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಗೀತಾ ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.